ರಾಮನಗರ; ಬಂದ್ ಕರೆ, ಎರಡು ದಿನ ಸೆಕ್ಷನ್ 144 ಜಾರಿ
ರಾಮನಗರ, ಫೆಬ್ರವರಿ ೧೯: ರಾಮನಗರ ನಗರಸಭೆಯ ಭ್ರಷ್ಟಾಚಾರ ಮತ್ತು ರೇಷ್ಮೆ ಮಾರುಕಟ್ಟೆ ಸ್ಥಳಾಂತರ ಖಂಡಿಸಿ ಜನ ಜಾಗೃತಿ ವೇದಿಕೆ ಹಾಗೂ ವಿವಿಧ ಜನಪರ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಮನಗರ ತಾಲ್ಲೂಕು ಆಡಳಿತ ನಗರ ವ್ಯಾಪ್ತಿಯಲ್ಲಿ 2 ದಿನ ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಿದೆ.
ರಾಮನಗರವು ಮತೀಯವಾಗಿ ಹಾಗೂ ರಾಜಕೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಮೆರವಣಿಗೆ, ಬಂದ್ ಗಳನ್ನು ನಡೆಸಿದಲ್ಲಿ ಅಹಿತಕರ ಘಟನೆ ನಡೆದರೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಮತ್ತಿತರ ಘಟನೆಗಳು ಸಂಭವಿಸಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುತ್ತದೆ.
ಶಿಕ್ಷಣ ಸಚಿವರ ವಿರುದ್ಧ ಫೆಬ್ರವರಿ 23ಕ್ಕೆ ಬೃಹತ್ ಹೋರಾಟ
ಈ ಹಿನ್ನೆಲೆಯಲ್ಲಿ ರಾಮನಗರ ತಹಶೀಲ್ದಾರ ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಟಿ.ಎಂ.ನರಸಿಂಹ ಮೂರ್ತಿ ಅವರು ಭಾರತೀಯ ದಂಡ ಸಂಹಿತೆ 1973ರ ಕಲಂ 144 ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ ಫೆ.19ರ ರಾತ್ರಿ 10 ಗಂಟೆಯಿಂದ ಫೆ.21ರ ಮಧ್ಯರಾತ್ರಿ 12 ಗಂಟೆಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಸದರಿ ಸಮಯದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಜಾಥಾ, ಮುಷ್ಕರ, ರಸ್ತೆ ತಡೆ, ಸಾರ್ವಜನಿಕ/ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವುದು ಹಾಗೂ ಮಾರಾಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.