ಕಾಶ್ಮೀರ, 370ನೇ ವಿಧಿ ರದ್ದತಿ: ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ
ರಾಮನಗರ, ಆ 5: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 'ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೆಯದು' ಎಂದು ಹೇಳಿದರು.
ಈ ಬಗ್ಗೆ ರಾಮನಗರದ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಜಮ್ಮು-ಕಾಶ್ಮೀರದಲ್ಲಿನ 370 ವಿಧಿ ಹಾಗೂ 35ಎ ವಿಧಿ ರದ್ದು ವಿಚಾರವಾಗಿ ಪರ ವಿರೋಧ. ಎರಡೂ ಇದೆ. ಹೆಚ್ಚಿನ ಜನ ರದ್ದಾಗಬೇಕು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದನ್ನು ಗಮನಿಸಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದರು.
"ನಂಗೆ ಕಲ್ಲಿನ ಮೇಲೆ ಹೆಸರು ಕೆತ್ತಿಸಿಕೊಳ್ಳೋ ಆಸೆಯಿಲ್ಲ"; ಎಚ್.ಡಿ.ಕುಮಾರಸ್ವಾಮಿ
'ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೆಯದು.
ಹಾಗೆಯೇ, ಜನರು ಸಮಾಜ ಶಾಂತಿಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡು ಯಾವುದೇ ಅಶಾಂತಿಗೆ ಅವಕಾಶ ಮಾಡಿಕೊಡದೇ ಉತ್ತಮ ರೀತಿಯಲ್ಲಿ ಹೋಗುವ ಮೂಲಕ ಅಂತಿಮ ಪರಿಹಾರ ದೊರಕಬೇಕು. ಜನರ ಭಾವನೆಗಳಿಗೆ ನಾವು ಒಮ್ಮತದ ಒಪ್ಪಿಗೆ ಕೊಡಬೇಕು' ಎಂದು ತಿಳಿಸಿದರು.
ಋಣಮುಕ್ತ ಕಾಯ್ದೆಯ ಬಗ್ಗೆ ಮಾತನಾಡುತ್ತಾ ಕುಮಾರಸ್ವಾಮಿ, ' ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಿದೆ. ಈ ಕಾಯಿದೆ ಅನುಷ್ಠಾನ ಈಗಿನ ಸರ್ಕಾರದ ಮೇಲಿದೆ. ಬಡವರ ಪರವಿದ್ದರೆ ಯಡಿಯೂರಪ್ಪನವರು ಈ ಕಾಯಿದೆಯನ್ನ ಜಾರಿಗೊಳಿಸುತ್ತಾರೆ. ಆದರೆ ಹಣವಂತರು, ಬಡ್ಡಿಕೋರರು, ಚುನಾವಣೆಗೆ ಹಣ ನೀಡುವವರೇ ಇವರ ಬಳಿ ಇರೋದು' ಎಂದು ಕುಮಾರಸ್ವಾಮಿ ಟೀಕಿಸಿದರು.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?
ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಮಾತನಾಡುತ್ತಾ, 'ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ನಮ್ಮ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಆರೋಪ ಮಾಡಿದ್ದರು. ಆದರೆ ಈಗ ಅವರ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ಅವರೇ ಹೇಳಬೇಕು' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.