ರಾಮನಗರ: ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆ ಜೆಡಿಎಸ್ ಪಾಲು
ರಾಮನಗರ, ನವೆಂಬರ್ 5: ತೀವ್ರ ಕುತೂಹಲ ಕೆರಳಿಸಿದ್ದ ರಾಮನಗರ ಜಿಲ್ಲೆಯ ಬಿಡದಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ನಿರೀಕ್ಷೆಯಂತೆಯೇ ಜೆಡಿಎಸ್ ಪಾಲಾಗಿವೆ.
ಬಿಡದಿ ಪುರಸಭೆಯ ಉಳಿದ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಸರಸ್ವತಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಲೋಕೇಶ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
ಅಕ್ರಮ ಮರಳುಗಾರಿಕೆ: ಸಂಸದ ಡಿಕೆ ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಗುಡುಗು
ಗುರುವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಾಗ ಬಿಸಿಎಂ (ಎ) ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ 10ನೇ ವಾರ್ಡಿನ ಜೆಡಿಎಸ್ ಸದಸ್ಯೆ ಸರಸ್ವತಿ ರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯ ಸಿ.ಲೋಕೇಶ್ ಉಮೇದುವಾರಿಕೆ ಸಲ್ಲಿಸಿದ್ದರೆ, ಕಾಂಗ್ರೆಸ್ ನಿಂದ 2ನೇ ವಾರ್ಡ್ ಸದಸ್ಯೆ ಚಂದ್ರಕಲಾ ಹಾಗೂ 12ನೇ ವಾರ್ಡ್ ಸದಸ್ಯ ಮಹೀಪತಿ ನಾಮಪತ್ರ ಹಾಕಿದ್ದರು.
ಜೆಡಿಎಸ್ ಪರ ಶಾಸಕ ಎ.ಮಂಜುನಾಥ್ ಸೇರಿ ಒಟ್ಟು 16 ಮತ
ಜೆಡಿಎಸ್ ಪರ ಶಾಸಕ ಎ.ಮಂಜುನಾಥ್ ಸೇರಿ ಒಟ್ಟು 16 ಮತಗಳು ಲಭ್ಯವಾದರೆ, ಕಾಂಗ್ರೆಸ್ ಪರ ಎಂಎಲ್ಸಿ ಸಿ.ಎಂ ಲಿಂಗಪ್ಪ ಅವರ ಮತ ಸೇರಿ ಒಟ್ಟು 9 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಗಿಂತ ಹೆಚ್ಚು ಮತಗಳನ್ನು ಗಳಿಸಿದ ಜೆಡಿಎಸ್ ಅಭ್ಯರ್ಥಿ ಸರಸ್ವತಿ ರಮೇಶ್ ಹಾಗೂ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯ ಸಿ.ಲೋಕೇಶ್ ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಾಮನಗರ ತಹಸೀಲ್ದಾರ ನರಸಿಂಹಮೂರ್ತಿ ಪ್ರಕಟಿಸಿದರು.
ಬಿಡದಿ ಪುರಸಭೆ ಸದಸ್ಯರ ಬಲ 23. ಇದರಲ್ಲಿ ಜೆಡಿಎಸ್ 12 ಹಾಗೂ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ನ 6 ಸದಸ್ಯರು ಜೆಡಿಎಸ್ ನಲ್ಲಿ ಗುರುತಿಸಿಕೊಂಡರೆ, ಜೆಡಿಎಸ್ ನ ಮೂವರು ಕಾಂಗ್ರೆಸ್ ಜತೆಯಲ್ಲಿದ್ದಾರೆ. ಈ ದೆಸೆಯಿಂದಾಗಿ ಕಾಂಗ್ರೆಸ್ ನಲ್ಲಿ 8 ಸದಸ್ಯರಾದರೆ, ಜೆಡಿಎಸ್ ಬಲ 15ಕ್ಕೆ ಏರಿಕೆಯಾಯಿತು. ಇದು ಜೆಡಿಎಸ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ವಿಜಯೋತ್ಸವ ಆಚರಣೆ
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಪುರಸಭೆ ಭವನದಿಂದ ನೂತನ ಅಧ್ಯಕ್ಷೆ ಸರಸ್ವತಿ ಮತ್ತು ಉಪಾಧ್ಯಕ್ಷ ಸಿ.ಲೋಕೇಶ್ ಅವರು ಶಾಸಕ ಎ.ಮಂಜುನಾಥ್ ಒಡಗೂಡಿ ಹೊರ ಬರುತ್ತಿದ್ದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾರತುರಾಯಿ ಹಾಕಿ ಅಭಿನಂದನೆ ಸಲ್ಲಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಪುರಸಭೆ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಚೇರಿ ಮಾರ್ಗದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ಒಗ್ಗಟ್ಟಿಗೆ ಜಯ
ನಮ್ಮ ಸದಸ್ಯರ ಪಕ್ಷ ನಿಷ್ಠೆ ಹಾಗೂ ಒಗ್ಗಟ್ಟಿನಿಂದಾಗಿ ಬಿಡದಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಸುಲಭ ಗೆಲುವು ಸಾಧ್ಯವಾಯಿತು. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ರಾಜಕೀಯ ಮಾಡುತ್ತೇವೆ ಇನ್ನುಳಿದಂತೆ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಬದ್ಧವಾಗಿದ್ದು, ಇನ್ನುಳಿದ ಅವಧಿಯಲ್ಲಿ ಇಲ್ಲಿನ ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಗಾಗಿ ಕಾಯಾ ವಾಚಾ ಮನಸ ಕೆಲಸ ಮಾಡಲು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಂಕಣ ಬದ್ಧರಾಗಿದ್ದಾರೆ ಎಂದರು.
Recommended Video
ಸಂಸದರ ವಿರುದ್ಧ ಪರೋಕ್ಷ ವಾಗ್ದಾಳಿ
ಬಿಡದಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಕುದುರೆ ವ್ಯಾಪಾರ ಮಾಡಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆರೋಪ ಮಾಡಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ತಮ್ಮ ಅಸಮಾಧಾನ ಹೊರಹಾಕಿದ ಶಾಸಕ ಎ.ಮಂಜುನಾಥ್, ಜೆಡಿಎಸ್ ಎಲ್ಲಿಯೂ ಕುದುರೆ ವ್ಯಾಪಾರ ಮಾಡಿಲ್ಲ, ಬದಲಾಗಿ ರಾಮನಗರ ತಾಪಂ ಹಾಗೂ ಎಪಿಎಂಸಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಸುರೇಶ್ ಅವರು ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪಕ್ಕೆ ಸದ್ಯ ಏನೂ ಹೇಳುವುದಿಲ್ಲ. ಕಾಲ ಬಂದಾಗ ಉತ್ತರ ಕೊಡಲಾಗುವುದು. ಈಗ ಏನಿದ್ದರೂ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಜಾರಿಕೊಂಡರು.