ಚನ್ನಪಟ್ಟಣದಲ್ಲಿ ರೇವಣ್ಣ ಪರ ಸ್ಯಾಂಡಲ್ ವುಡ್ ಸ್ಟಾರ್ಸ್ ಮತಯಾಚನೆ
ರಾಮನಗರ, ಮೇ 3: ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಮತದಾರರ ಮನ ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಅದರಲ್ಲೂ ಜಿದ್ದಾಜಿದ್ದಿನ ಕಣವಾಗಿರುವ ಗೊಂಬೆನಗರಿ ಚನ್ನಪಟ್ಟಣದಲ್ಲಿ ಸ್ಯಾಂಡಲ್ ವುಡ್ ನಾಯಕ, ನಾಯಕಿಯರು ರೋಡ್ ಶೋ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಪರ ಮತ ಯಾಚಿಸುತ್ತಿದ್ದಾರೆ.
ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪರ ನಟ ಯಶ್ ಭರ್ಜರಿ ಪ್ರಚಾರ
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ರೇವಣ್ಣ ಪರವಾಗಿ ಒಳ್ಳೆ ಹುಡುಗ ಪ್ರಥಮ್, ಸ್ಟಾರ್ ನಿರ್ದೇಶಕ ಆರ್. ಚಂದ್ರು, ಕೃಷ್ಣಲೀಲಾ ಖ್ಯಾತಿಯ ಮಯೂರಿ, ನಟಿ ರೂಪಿಕ ಸೇರಿದಂತೆ ಹಲವು ತಾರೆಯರು ಪ್ರಚಾರ ನಡೆಸಿದರು.
ಮೊದಲಿಗೆ ಚನ್ನಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ನಂತರ ತಾರೆಯರು ತಮ್ಮ ಪ್ರಚಾರ ಆರಂಭಿಸಿದರು. ಪ್ರಥಮ್ ಮಾತನಾಡಿ, ರೇವಣ್ಣ ಸಾಹೇಬ್ರು ತುಂಬಾ ಸಜ್ಜನರು. ಇಲ್ಲಿನ ಜನ ಯೋಗೇಶ್ವರ್ ಅವರನ್ನು 15 ವರ್ಷದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಅವರಿಗೆ ರೆಸ್ಟ್ ನೀಡಿ. ಇನ್ನು ಕುಮಾರಣ್ಣ ರಾಮನಗರದಲ್ಲಿ ಗೆಲ್ತಾರೆ.
ಇಲ್ಲೂ ಗೆದ್ರೆ, ಮತ್ತೆ ಬೈ ಎಲೆಕ್ಷನ್ ನಡೆಯುತ್ತೆ, ಇದೆಲ್ಲ ಯಾಕೆ? ರೇವಣ್ಣರನ್ನು ಗೆಲ್ಲಿಸಿ ಅಂತಾ ಅವರದ್ದೆ ಕಾಮಿಡಿ ಸ್ಟೈಲ್ ನಲ್ಲಿ ಹೇಳಿ ಪ್ರಚಾರ ಮಾಡಿದರು.
ಆರ್ ಚಂದ್ರು ಮಾತನಾಡಿ, ರೇವಣ್ಣ ಅವರು ಸಜ್ಜನ ವ್ಯಕ್ತಿ. ಅವರು ಸಚಿವರಾಗಿದ್ದಾಗ ಬಹಳಷ್ಟು ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದರು. ಇವರ ಜೊತೆಗೆ ಸ್ಯಾಂಡಲ್ ವುಡ್ ನ ನಾಯಕಿ ಮಯೂರಿ ಮತ್ತು ರೂಪಿಕಾ ಕೂಡ ರೇವಣ್ಣ ಪರ ರೋಡ್ ಶೊ ನಡೆಸಿ ಪ್ರಚಾರ ನಡೆಸಿದರು.
ಒಟ್ಟಿನಲ್ಲಿ ಇವತ್ತು ಸ್ಯಾಂಡಲ್ ವುಡ್ ಮಂದಿ ಚನ್ನಪಟ್ಟಣದಲ್ಲಿ ಚುನಾವಣಾ ಅಖಾಡಕ್ಕೆ ಇಳಿದು ಪ್ರಚಾರ ಮಾಡಿದ್ದಾರೆ. ಆದರೆ ಇವರ ಪ್ರಚಾರ ಯಾವ ರೀತಿ ವರ್ಕ್ ಔಟ್ ಆಗುತ್ತೆ ಅನ್ನೊದನ್ನ ಮೇ 15 ರಂದು ರಿಸಲ್ಟ್ ಬಂದ ಮೇಲೆ ಗೊತ್ತಾಗಲಿದೆ.