ಬೊಂಬೆನಗರಿಯಲ್ಲಿ ಗಿಡಗಳನ್ನು ಕೊಟ್ಟು ದೇಣಿಗೆ ಸಂಗ್ರಹಿಸಿದ ಸಾಲುಮರದ ತಿಮ್ಮಕ್ಕ
ರಾಮನಗರ, ಆಗಸ್ಟ್. 22: ಕೊಡಗಿನಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ವರುಣನ ಅವಾಂತರಕ್ಕೆ ಮನೆಗಳೇ ಕೊಚ್ಚಿಹೋಗಿದ್ದು, ತಮ್ಮ ಊರು ಯಾವುದು ಎಂಬುದು ಗೊತ್ತಾಗದೆ ಜನ ಕಂಗಲಾಗಿದ್ದಾರೆ.
ಅಂದಹಾಗೆ ಕೊಡಗಿನ ನಿರಾಶ್ರಿತರ ಸಹಾಯಕ್ಕಾಗಿ ಚನ್ನಪಟ್ಟಣದ ಕಾವೇರಿ ಸರ್ಕಲ್ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕರಿಂದ ಸಾರ್ವಜನಿಕರಿಗೆ ಎಳನೀರು, ಕಬ್ಬಿನಹಾಲು, ಗಿಡಗಳನ್ನು ಕೊಡಿಸಿ 50,100 ರೂ.ಹಣವನ್ನು ಸಂಗ್ರಹಿಸಿದರು.
ಕಾವೇರಿ ಕೊಟ್ಟ 'ಕೊಡಗಿಗೆ' ಮಿಡಿದ ಕರುನಾಡ ಹೃದಯ: ಧನ್ಯವಾದ ಕರ್ನಾಟಕ!
ಇನ್ನು ಸಾಲುಮರದ ತಿಮ್ಮಕ್ಕನನ್ನು ನೋಡಲು ಬಂದ ಜನರು ಅವರು ನೀಡಿದ ಗಿಡಗಳನ್ನು ಪಡೆದು ಎಳನೀರು, ಕಬ್ಬಿನಹಾಲು ಕುಡಿದು ತಮ್ಮ ಕೈಲಾದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿದರು. ಅಲ್ಲದೇ ಸಾಲು ಮರದ ತಿಮ್ಮಕ್ಕನ ಜೊತೆ ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಈ ದೇಣಿಗೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾಲುಮರದ ತಿಮ್ಮಕ್ಕ , ಪ್ರತಿಯೊಬ್ಬರು ಕೂಡ ಕೊಡಗಿನಲ್ಲಿ ಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಬೇಕೆಂದು ಕೋರಿಕೊಂಡರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಈ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಹಾಗೆಯೇ ಚನ್ನಪಟ್ಟಣದ ಮಾದಾಪುರ ಗ್ರಾಮದ ಮಹಿಳೆ ಮಂಗಳಮ್ಮ ಎಳನೀರು ಕೆತ್ತಿ ದೇಣಿಗೆ ನೀಡಿದ ಜನರಿಗೆ ಕೊಟ್ಟದ್ದು ವಿಶೇಷವಾಗಿತ್ತು. ನೊಂದವರಿಗೆ ನೆರವಾಗಬೇಕೆಂಬ ಸದುದ್ದೇಶದಿಂದ ಹಮ್ಮಿಕೊಂಡಿದ್ದ ಈ ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಕಂಡುಬಂತು.
ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಕೆಲವರ ಸ್ವಾರ್ಥದಿಂದ ಪರಿಸರ ನಾಶವಾಗಿ ಇಂದು ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಇನ್ನು ಮುಂದಾದರೂ ಪರಿಸರವನ್ನು ಸಂರಕ್ಷಣೆ ಮಾಡಿ, ರಾಜ್ಯ ಸರ್ಕಾರ ಕೊಡಗಿನಲ್ಲಿರುವ ನಿರಾಶ್ರಿತರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರವನ್ನ ನೀಡಬೇಕು ಎಂದು ಮನವಿ ಮಾಡಿದರು.