ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಮಾನವಾದರೂ ಉಳಿಯುತ್ತಿತ್ತೇನೋ?
ರಾಮನಗರ, ನವೆಂಬರ್.02: ಕುತೂಹಲದ ಮತ್ತು ರಾಜಕೀಯವಾಗಿಯೂ ಪ್ರತಿಷ್ಠಿತ ಕಣವಾಗಿದ್ದ ರಾಮನಗರ ಕ್ಷೇತ್ರದತ್ತ ರಾಜ್ಯದ ಜನ ಕುತೂಹಲಭರಿತ ಕಣ್ಣುಗಳಿಂದ ನೋಡತೊಡಗಿದ್ದು, ಅಲ್ಲಿ ನಡೆಯುವ ಪ್ರತಿ ಕ್ಷಣದ ಬೆಳವಣಿಗೆಗಳು ಮಹತ್ವವನ್ನು ಪಡೆದುಕೊಳ್ಳುತ್ತಿವೆ.
ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದರೆ ಅವರ ವಿರುದ್ಧವಾಗಿ ನಿಂತು ಗೆಲ್ಲಲು ಸಮರ್ಥ ಅಭ್ಯರ್ಥಿ ರಾಮನಗರದ ಬಿಜೆಪಿಯಲ್ಲಿ ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಬಿಜೆಪಿ ನಾಯಕರು ಬೇರೆ ಪಕ್ಷದಿಂದ ಆಮದು ಮಾಡುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು.
ಹಾಗೆ ನೋಡಿದರೆ ಬಿಜೆಪಿ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಪಕ್ಷದ ತಳಮಟ್ಟದಿಂದ ಬಂದ ನಾಯಕರನ್ನು ನಂಬದ ರಾಜ್ಯ ನಾಯಕರು ಬೇರೆ ಪಕ್ಷದಿಂದ ಬಂದ ನಾಯಕರಿಗೆ ಮಣೆ ಹಾಕಿ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸುತ್ತಾರೆ. ಉಪಚುನಾವಣೆ ಘೋಷಣೆಯಾದಾಗ ಬಿಜೆಪಿಯ ಜಿಲ್ಲಾಧ್ಯಕ್ಷ ರುದ್ರೇಶ್ ಅವರು ಆಕಾಂಕ್ಷಿಗಳಾಗಿದ್ದರು.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ!
ಒಂದು ವೇಳೆ ಅವರಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಮಾನವಾದರೂ ಉಳಿಯುತ್ತಿತ್ತೇನೋ? ಆದರೆ ಅದ್ಯಾವುದು ಆಗಲೇ ಇಲ್ಲ. ಬದಲಿಗೆ ಕಾಂಗ್ರೆಸ್ನಿಂದ ಬಂದ ಎಲ್.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿ ಬಿಟ್ಟರು. ಆದರೆ ಚಂದ್ರಶೇಖರ್ ಹಿಂದೆ ಮಾಸ್ಟರ್ ಮೈಂಡ್ಗಳಾದ ಡಿಕೆ ಬ್ರದರ್ಶ್ ಅವರಿದ್ದಾರೆ ಎಂಬ ಚಿಕ್ಕ ಅನುಮಾನವೂ ಬಿಜೆಪಿಯ ನಾಯಕರಿಗೆ ಬಂದಿರಲಿಲ್ಲ. ಮುಂದೆ ಓದಿ...
ನಿಷ್ಠಾವಂತ ಕಾರ್ಯಕರ್ತರು ಬಲಿಪಶುಗಳು
ಈಗ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಒಂದು ವಾರದ ಹಿಂದೆಯೇ ಗೊತ್ತಾಗಿತ್ತು. ಹಾಗಾಗಿ ನಾನು ಆ ಕಡೆ ತಿರುಗಿಯೂ ನೋಡಲಿಲ್ಲ ಎಂಬಂತಹ ತಿಪ್ಪೆ ಸಾರಿಸುವ ಮಾತನಾಡಿರೂ ಅದು ರಾಷ್ಟ್ರೀಯ ಪಕ್ಷ ಬಿಜೆಪಿ ಮುಖಕ್ಕೆ ರಾಚಿದ ಹೊಲಸು ಎಂಬುದು ಜನಕ್ಕೆ ಗೊತ್ತಾಗದ ವಿಚಾರವೇನಲ್ಲ. ಇಲ್ಲಿ ಬಲಿಪಶುಗಳಾಗಿರುವುದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಎಂಬುದರಲ್ಲಿ ಎರಡು ಮಾತಿಲ್ಲ.
ರಾಮನಗರ: ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ
ಹಗಲಿರುಳು ದುಡಿದ ಜಿಲ್ಲಾಧ್ಯಕ್ಷ
ಯಾರು ಯಾವ ಆಮಿಷಕ್ಕೆ ಒಳಗಾಗಿ ತಮ್ಮತನವನ್ನು ಕಳೆದುಕೊಂಡರೋ ಗೊತ್ತಿಲ್ಲ. ಆದರೆ ಜಿಲ್ಲಾಧ್ಯಕ್ಷ ರುದ್ರೇಶ್ ಮಾತ್ರ ರಾಮನಗರದಲ್ಲಿ ಬಿಜೆಪಿಯನ್ನು ಸಂಘಟಿಸಲೇಬೇಕೆಂಬ ಹಠಕ್ಕೆ ಬಿದ್ದು ಹಗಲು ರಾತ್ರಿ ಎಂಬಂತೆ ದುಡಿಯುತ್ತಿದ್ದರು. ಆದರೆ ಈಗ ಆಗಿರುವ ಆಘಾತಕ್ಕೆ ಬಿಜೆಪಿಯ ರಾಜ್ಯ ನಾಯಕರು ಯಾವ ರೀತಿಯ ಚಿಕಿತ್ಸೆ ನೀಡುತ್ತಾರೋ ಗೊತ್ತಿಲ್ಲ.
ರಾಮನಗರದಲ್ಲಿ ರಾಜ್ಯ ಬಿಜೆಪಿ ಮುಖಂಡರೇ 'ಬಿಜೆಪಿಯನ್ನು ಬಕ್ರಾ' ಮಾಡಿದ್ರಾ?
ಅನಿತಾಕುಮಾರಸ್ವಾಮಿ ಗೆಲುವು ನಿರಾಯಾಸ
ರಾಮನಗರದ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಅವರ ಗೆಲುವು ನಿರಾಯಾಸ ಎಂಬುದು ಸ್ಪಷ್ಟವಾಗುತ್ತಿದೆ. ಅನಿತಾ ಕುಮಾರಸ್ವಾಮಿ ಹಾಗೂ 4 ಜನ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಕಣದಲ್ಲಿ 5 ಜನ ಅಭ್ಯರ್ಥಿಗಳಿದ್ದಾರೆ.
ಸದ್ಯ ಕಾರ್ಯಕರ್ತರು ವಿಚಲಿತರಾಗದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದಾಗಿ, ಬಿಜೆಪಿ ಚಿನ್ಹೆ ಇಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ನಿರ್ಧರಿಸಿದ್ದಾರೆ.
ಕಾರ್ಯಕರ್ತರನ್ನು ಕೇಳುವವರೇ ಇಲ್ಲ
ನಾಳೆ ಮತಕೇಂದ್ರಕ್ಕೆ ಹೋಗುವ ಮತದಾರ ಯಾವ ರೀತಿಯ ತೀರ್ಮಾನಗೊಳ್ಳುತ್ತಾನೆ? ಎಷ್ಟು ಜನ ಮತದಾರರಿಗೆ ಬಿಜೆಪಿ ಅಭ್ಯರ್ಥಿ ಯುದ್ಧಕ್ಕೆ ಮುನ್ನ ಶಸ್ತ್ರಾಸ್ತ್ರ ಕೆಳಗಿಟ್ಟು ಕಾಂಗ್ರೆಸ್ ಶರಣಾಗಿರುವುದು ಗೊತ್ತಾಗಿದೆಯೋ ತಿಳಿದಿಲ್ಲ.
ಈಗಾಗಲೇ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಎಲ್.ಚಂದ್ರಶೇಖರ್ ಅವರ ಭಾವಚಿತ್ರವಿರುವ ಬ್ಯಾನರ್ ಮತ್ತು ಕರಪತ್ರಗಳಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಜತೆಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ಕೋಪ ಆಕ್ರೋಶಗಳಿಂದ ಏನೂ ಮಾಡಲಾಗುವುದಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ.
ಜತೆಗೆ ರಾಜ್ಯ ನಾಯಕರೇ ಮೌನಕ್ಕೆ ಶರಣಾಗಿದ್ದು, ಚುನಾವಣೆಗಾಗಿ ಕಷ್ಟಪಟ್ಟು ದುಡಿದ ಕಾರ್ಯಕರ್ತರನ್ನು ಕೇಳುವವರೇ ಇಲ್ಲದಾಗಿದೆ. ಅಂತೂ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಂತಹದೊಂದು ಪರಿಸ್ಥಿತಿ ಬರಬಾರದಿತ್ತು.