ಕೋವಿಡ್ ನಿಯಂತ್ರಣಕ್ಕೆ ಅನುದಾನದ ಕೊರತೆ ಇಲ್ಲ; ಪ್ರತಿ ತಾಲ್ಲೂಕಿಗೆ 25 ಲಕ್ಷ ರೂ. ಬಿಡುಗಡೆ
ರಾಮನಗರ, ಏಪ್ರಿಲ್ 18: ರಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿಯತ್ರಣಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ, ಪ್ರತಿ ತಾಲ್ಲೂಕಿಗೆ ಈಗಾಗಲೇ ತಲಾ 25 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು.
ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಕೋವಿಡ್ ನಿಯಂತ್ರಿಸುವ ಕೆಲಸಗಳಿಗೆ ತಾಲ್ಲೂಕು ಆಡಳಿತ ಮೊದಲ ಆದ್ಯತೆ ನೀಡಬೇಕು. ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಕೆಲಸವನ್ನು ಕ್ಷಿಪ್ರವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚಿಸಿದರು.
ರಾಮನಗರ; ಶಾಸಕಿ ಅನಿತಾ ಕುಮಾರಸ್ವಾಮಿ ಹೋಂ ಕ್ವಾರಂಟೈನ್
ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಸೋಂಕು ಪರೀಕ್ಷೆಯನ್ನು ಹೆಚ್ಚಳಗೊಳಿಸಬೇಕು. ಸ್ವ್ಯಾಬ್ ಕಲೆಕ್ಟ್ ಮಾಡಲು ಸಿಬ್ಬಂದಿ ಕೊರತೆ ಇದ್ದಲ್ಲಿ ನಿಯಮಾವಳಿಗಳಂತೆ ನಿಯೋಜಿಸಿಕೊಳ್ಳಿ, ವಾಹನದ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜನಸಂದಣಿ ಇರುವ ಪ್ರದೇಶಗಳಲ್ಲಿ ಮೊಬೈಲ್ ಪರೀಕ್ಷಾ ಕೇಂದ್ರ ಆರಂಭಿಸಿ ಸ್ವ್ಯಾಬ್ ಸಂಗ್ರಹಿಸಿ ಶೀಘ್ರ ಪತ್ತೆಯಿಂದ ರೋಗ ಹರಡುವುದನ್ನು ನಿಯಂತ್ರಿಸಬಹುದು ಎಂದ ಅವರು, ಖಾಸಗಿ ಆಸ್ಪತ್ರೆ/ಕ್ಲಿನಿಕ್ ಅವರಿಗೆ ಸೂಚನೆ ನೀಡಿ, ಐಎಲ್ಐ ಹಾಗೂ ಎಸ್ಎಆರ್ಐ ಪ್ರಕರಣಗಳ ಪಟ್ಟಿ ಪಡೆದು ಪರೀಕ್ಷೆಗೆ ಒಳಪಡಿಸಿ. ಖಾಸಗಿ ಆಸ್ಪತ್ರೆ/ಕ್ಲಿನಿಕ್ ಅವರು ಸಹಕರಿಸದಿದ್ದರೆ ನೋಟೀಸ್ ಜಾರಿ ಮಾಡಿ ಎಂದರು.
ಕೋವಿಡ್ ಸೋಂಕು ಪರೀಕ್ಷೆಯ ನಂತರ ವರದಿಯನ್ನು ಶೀಘ್ರವಾಗಿ ನೀಡಲು ವ್ಯವಸ್ಥೆ ಮಾಡಿಕೊಳ್ಳಿ. ಎರಡು ಪಾಳಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಕ ಮಾಡಿಕೊಳ್ಳಿ, ಪರೀಕ್ಷಾ ವರದಿಯನ್ನು ಶೀಘ್ರವಾಗಿ ನೀಡಬಹುದು ಎಂದು ತಿಳಿಸಿದರು.
ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಟ್ರೇಸಿಂಗ್ ತಂಡಗಳನ್ನು ವಾರ್ಡ್/ಗ್ರಾಮವಾರು ನಿಯೋಜಿಸಿಕೊಂಡು ಕೋವಿಡ್ ಸೋಂಕಿತರ ಸಂಪರ್ಕಿತರ ಪತ್ತೆ ಕೆಲಸ ಚುರುಕುಗೊಳಿಸಿ. ಕೋವಿಡ್ ವಾರ್ ರೂಂ ನಲ್ಲಿ ಕ್ರಮಬದ್ಧವಾಗಿ ಉತ್ತಮ ರೀತಿಯಲ್ಲಿ ಕೆಲಸವಾಗಬೇಕು. ಪರಿಶೀಲನೆಯ ವೇಳೆ ಯಾವುದೇ ಲೋಪ ಇರಬಾರದು ಎಂದು ಎಚ್ಚರಿಕೆ ನೀಡಿದರು.
ಆರೋಗ್ಯ ಸಿಬ್ಬಂದಿಗಳು ಹಾಗೂ ಫ್ರಂಟ್ ಲೈನ್ ವರ್ಕರ್ಸ್ ಗಳು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ವಾರ್ ರೂಂ ಮೂಲಕ ಕರೆ ಮಾಡಿ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿ ಅವರ ಆರೋಗ್ಯ ಅತ್ಯಂತ ಮುಖ್ಯ ಎಂದು ಹೇಳಿದರು.
ಪಿ.ಎಚ್.ಸಿ ವಾರು ಕೋವಿಡ್ ಲಸಿಕೆ ಸಾಧನೆಯ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಕಡಿಮೆ ಸಾಧನೆಯಾಗಿರುವ ಪಿ.ಎಚ್.ಸಿಗಳಿಗೆ ಗ್ರಾಮದಲ್ಲಿ ಇಲಾಖೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ಜಾಗೃತಿ ಕಾರ್ಯಕ್ರಮಗಳ ನಂತರವು ಲಸಿಕೆ ಪಡೆಯುತ್ತಿಲ್ಲ ಎಂದು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವಂತೆ ಪ್ರೇರೇಪಿಸಿ ಎಂದು ಸೂಚನೆ ನೀಡಿದರು.
Recommended Video
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮಾ, ಡಿಎಸ್ಒ ಡಾ.ಕಿರಣ್ ಶಂಕರ್, ತಾಲ್ಲೂಕು ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.