ಚನ್ನಪಟ್ಟಣ; ಎಸಿಪಿ ತಂಗಿ ಮನೆ ದರೋಡೆ ಮಾಡಿ, ಧೈರ್ಯ ಹೇಳಿ ಹೋದ ಕಳ್ಳರು
ಚನ್ನಪಟ್ಟಣ, ಮಾರ್ಚ್ 9: ಹಾಡಹಗಲಲ್ಲೇ ಎಸಿಪಿ ಸಹೋದರಿ ಮನೆಗೆ ನುಗ್ಗಿ ಲಾಂಗ್ ತೋರಿಸಿ ಮನೆಯಲ್ಲಿ ನಗ ನಾಣ್ಯ ದೋಚಿರುವ ಘಟನೆ ಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದೆ.
ಪಟ್ಟಣದ ಮಹದೇಶ್ವರ ನಗರ ಬಳಿಯ ಕೆಎಚ್ ಬಿ ಕಾಲೋನಿಯಲ್ಲಿ ಮಧ್ಯಾಹ್ನ 3ರ ಸಮಯದಲ್ಲಿ ಮನೆಗೆ ನುಗ್ಗಿದ ನಾಲ್ವರ ತಂಡ, ಮನೆಯಲ್ಲಿದ್ದ ತಾಯಿ ಮಗಳಿಗೆ ಲಾಂಗ್ ಮಚ್ಚು ತೋರಿಸಿ ಸುಮಾರು 60 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ದೋಚಿ ನಂತರ ತಾಯಿ ಮಗಳನ್ನು ರೂಂನಲ್ಲಿ ಕೂಡಿಹಾಕಿದ್ದಾರೆ. ಮೈಸೂರಿನಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಗೋಪಾಲ್ ಅವರ ಸಹೋದರಿ ಸುವರ್ಣ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
Video: ಬ್ಯಾಂಕ್ ಲೂಟಿಗೆ ಬಂದು, ಸೈರನ್ ಸೌಂಡ್ ಗೆ ಕಾಲ್ಕಿತ್ತ ಭೂಪ
ದರೋಡೆ ನಡೆದಾಗ ಸುವರ್ಣರ ಪತಿ ಉತ್ತೇಶ್ ಮನೆಯಲ್ಲಿ ಇರಲಿಲ್ಲ. ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಸುಮಾರು 20-23 ವಯಸ್ಸಿನ ನಾಲ್ವರು ಮನೆಗೆ ನುಗ್ಗಿ ತಾಯಿ ಸುವರ್ಣ ಮತ್ತು ಮಗಳು ಇಂಚರ ಇಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ ಸುವರ್ಣರ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರ, ಕಿವಿ ಓಲೆಗಳು ಹಾಗೂ ಮಗಳು ಧರಿಸಿದ್ದ ಒಡವೆಗಳನ್ನು ಬಿಚ್ಚಿಸಿಕೊಂಡು ನಂತರ ಮನೆಯಲ್ಲಿದ್ದ ಬೀರು ಜಾಲಾಡಿ 10 ಸಾವಿರ ನಗದು ತೆಗೆದುಕೊಂಡಿದ್ದಾರೆ.
ಮನೆ ಜಾಲಾಡುವಾಗ ಟಿ.ವಿ ಮೇಲಿದ್ದ ಎಸಿಪಿ ಗೋಪಾಲ್ ಅವರ ಪೊಲೀಸ್ ಸಮವಸ್ತ್ರದಲ್ಲಿದ್ದ ಫೋಟೊ ನೋಡಿದ ದರೋಡೆಕೋರರು, ಸುವರ್ಣ ಅವರಿಗೆ, ನಾವು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಬಂದಿದ್ದೆವು. ಆದರೆ ಅವರು ಹುಷಾರಾಗಿಬಿಟ್ಟರು. ನಾವು ಬಂದಿರುವ ವಿಚಾರ ಅವರಿಗೆ ತಿಳಿಯಬೇಕು. ಅದಕ್ಕೆ ನಿಮ್ಮ ಮನೆ ದರೋಡೆ ಮಾಡುತ್ತಿದ್ದೇವೆ. ನೀವು ಹೆದರಬೇಡಿ, ಕೂಗಾಡಬೇಡಿ. ನಾವು ಹೋದ ನಂತರ ಪೊಲೀಸರಿಗೆ ದೂರು ಕೊಡಿ, ನಿಮಗೆ ನಿಮ್ಮ ಒಡವೆ ಸಿಗುತ್ತವೆ ಎಂದು ಹೇಳಿ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಕೈಗೊಂಡಿದ್ದು, ಘಟನೆ ನಡೆದ ಬಡಾವಣೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.