ಹಕ್ಕು ಪತ್ರಕ್ಕಾಗಿ ಆದಿವಾಸಿಗಳಿಂದ ಅರಣ್ಯದಲ್ಲಿ ಪ್ರತಿಭಟನೆ
ರಾಮನಗರ, ಡಿಸೆಂಬರ್ 14 : ಆದಿವಾಸಿ ಇರುಳಿಗ ಜನರು ಸಾಗುವಳಿ ಮತ್ತು ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅರಣ್ಯದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿ ಅಲ್ಲೇ ದಿನ ಕಳೆಯುವ ಮೂಲಕ ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನದೊಡ್ಡಿ ಇರುಳಿಗರು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಬಂಟನಾಳ ಅರಣ್ಯ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ತಮಗೆ ಅರಣ್ಯ ಪ್ರದೇಶದಲ್ಲಿ ವಾಸ ಮಾಡಲು ನಿವೇಶನ ಹಾಗೂ ಸಾಗುವಳಿ ಮಾಡಲು ಹಕ್ಕುಪತ್ರ ನೀಡಿ, ಪುನರ್ವಸತಿ ಕಲ್ಪಿಸುವಂತೆ ಅದಿವಾಸಿ ಇರುಳಿಗರು ಅಗ್ರಹಿಸಿದರು.
ಬಂಟನಾಳ ಅರಣ್ಯ ಪ್ರದೇಶದಲ್ಲಿ ಅದಿವಾಸಿ ಇರುಳಿಗ ಸಮುದಾಯದ ಮಂದಿ ತಾತ್ಕಾಲಿಕ ಗುಡಿಸಲು ನಿರ್ಮಿಸಿ, ಅಲ್ಲೇ ವಾಸಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಜನವರಿ ಹಾಗೂ ಫೆಬ್ರವರಿ ಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ತಿಂಗಳಿಗು ಹೆಚ್ಚು ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು. ಮತ್ತು ಅರಣ್ಯದ ಒಳಗು ಇರುಳಿಗರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಜಂಟಿ ಸರ್ವೆ ಕಾರ್ಯಮಾಡಿದ್ದ ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ಹಕ್ಕುಪತ್ರ ನೀಡಿ, ನಮಗೆ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದರು.
ಆದರೆ ಹಲವಾರು ತಿಂಗಳು ಕಳೆದರು ಈವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ, ಬಂಟನಾಳ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಗುಡಿಸಲುಗಳನ್ಬು ನಿರ್ಮಾಣ ಮಾಡಿ, ಅರಣ್ಯವಾಸಿ ಇರುಳಿಗ ಸಮುದಾಯ ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ.