ರಂಗಾಯಣ ನಿರ್ದೇಶಕರ ನೇಮಕ ಅಕ್ರಮವೆಂದ ಮಾಜಿ ನಿರ್ದೇಶಕ
ಮೈಸೂರು, ಫೆಬ್ರವರಿ 20: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಅಕ್ರಮವಾಗಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಆರೋಪಿಸಿದ್ದಾರೆ.
ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ಧನ್ ಅವರು, ರಂಗಾಯಣ ಸ್ವಾಯತ್ತ ಸಂಸ್ಥೆಯಾಗಿದ್ದು, ನಿರ್ದೇಶಕರ ಆಯ್ಕೆ ರಂಗ ಸಮಾಜದ ಮೂಲಕ ಆಗುತ್ತದೆ ಎಂದರು.
ರಂಗಾಯಣಕ್ಕೆ ಸಂಘರ್ಷ ಮಾಡಲು ಬಂದಿಲ್ಲ: ನಿರ್ದೇಶಕ ಅಡ್ಡಂಡ ಕಾರ್ಯಪ್ಪ
ಆದರೆ ರಂಗ ಸಮಾಜದಲ್ಲಿ ಅಡ್ಡಂಡ ಕಾರ್ಯಪ್ಪ ಹೆಸರು ಪ್ರಸ್ತಾಪವೇ ಆಗಿಲ್ಲ. ರಂಗಾಯಣ ನಿರ್ದೇಶಕರಾಗಲು ಅನೇಕ ಮಾನದಂಡ ಇದೆ. ಆ ಮಾನದಂಡ ಅಡ್ಡಂಡ ಕಾರ್ಯಪ್ಪನಿಗೆ ಇಲ್ಲ. ಆದರೂ ಏಕಾಏಕಿ ಅಡ್ಡಂಡ ಕಾರ್ಯಪ್ಪನನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಡ್ಡಂಡ ಕಾರ್ಯಪ್ಪ ರಾಜಕೀಯವಾಗಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ ಎಂದು ಆಪಾದಿಸಿದರು.
ರಂಗಾಯಣಕ್ಕೆ ಕೊರೊನಾ ವೈರಸ್ ಬಂದಿದೆ. ಅಲ್ಲಿನ ಕಲಾವಿದರು ಈ ಕೊರೊನಾದಿಂದ ತಪ್ಪಿಸಿಕೊಳ್ಳಬೇಕಿದೆ. ಯಾರೂ ಕೂಡ ಈ ವೈರಸ್ ಗೆ ಬಲಿಯಾಗಬಾರದು. ಹಾಗಾಗಿ ನಾವು ಈ ವೈರಸ್ ಬಗ್ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಡ್ಡಂಡ ಕಾರ್ಯಪ್ಪ ಅವರನ್ನು ಕೊರೊನಾ ವೈರಸ್ ಗೆ ಹೋಲಿಸಿದ್ದಾರೆ.
ಆರು ದಿನಗಳ ಬಹುರೂಪಿ ನಾಟಕೋತ್ಸವಕ್ಕೆ ಸಂಭ್ರಮದ ತೆರೆ
ಅಡ್ಡಂಡ ಕಾರ್ಯಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ. ಈ ಕೂಡಲೇ ಅಡ್ಡಂಡ ಕಾರ್ಯಪ್ಪ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಅವರ ಅಕ್ರಮದ ಬಗ್ಗೆ ಎಲ್ಲ ದಾಖಲೆ ನಮ್ಮ ಬಳಿ ಇದೆ ಎಂದು ತಿರುಗೇಟು ನೀಡಿದರು.