ಕೆರೆಯಲ್ಲಿ ಈಜಲು ಹೋಗಿ ನವದಂಪತಿಗಳು ಸೇರಿ ನಾಲ್ವರು ನೀರು ಪಾಲು
Recommended Video
ರಾಮನಗರ, ಏಪ್ರಿಲ್ 09: ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ನವದಂಪತಿಗಳು ಮತ್ತು ಸಂಬಂಧಿಕರ ಇಬ್ಬರು ಮಕ್ಕಳು ಸೇರಿ ನಾಲ್ಕು ಮಂದಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ನೂರಾರು ಕನಸು ಹೊತ್ತು ಹೊಸ ಜೀವನಕ್ಕೆ ಅಡಿಯಿಟ್ಟು ಎರಡು ತಿಂಗಳು ಕಳೆಯುವ ಮನ್ನವೇ ನವ ದಂಪತಿಗಳು ಜವರಾಯನ ಪಾಶಕ್ಕೆ ಬಲಿಯಾಗಿರುವ ಮನ ಕಲಕುವ ಘಟನೆ ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ ಹನುಮಂತ ನಗರದ ದಂಪತಿಗಳಾದ ಶೇಖರ್ (31) ಹಾಗೂ ಸುಮಾ (28) ಮತ್ತು ಚಿಕ್ಕೇನಹಳ್ಳಿ ಗ್ರಾಮದ ಮಕ್ಕಳಾದ ಧನುಷ್ (6) ಹಾಗೂ ಹಂಸ (7) ಮೃತ ದುರ್ದೈವಿಗಳು. ನವ ವಧು ಸುಮಾ ತನ್ನ ಪತಿ ಶೇಖರ್ ನೂಂದಿಗೆ ತನ್ನ ಚಿಕ್ಕಮ್ಮ ಶಶಿಕಲಾ ಮನೆಗೆ ಹಬ್ಬಕ್ಕೆಂದು ಬಂದಿದ್ದರು.
ಭಾನುವಾರ ಬೆಳಿಗ್ಗೆ ತಿಂಡಿ ತಿಂದು ತನ್ನ ಚಿಕ್ಕಮ್ಮ ಶಶಿಕಲಾ ಮಕ್ಕಳಾದ ಧನುಷ್ ಹಾಗೂ ಹಂಸ ಜೊತೆ ಶೇಖರ್ ಹಾಗೂ ಸುಮಾ ಕಾಲಕಳೆಯಲು ತೋಟದ ಬಳಿಗೆ ಬಂದಿದ್ದರು. ಅಲ್ಲೆ ತೋಟದ ಪಕ್ಕದಲ್ಲಿದ್ದ ಕೆರೆ ಕಂಡಿದೆ. ಕೆರೆಯ ನೀರು ಕಂಡ ತಕ್ಷಣ ಈಜಲು ಮಕ್ಕಳು ಬಟ್ಟೆ ಬಿಚ್ಚಿ ಕೆರೆಗೆ ಇಳಿದಿದ್ದರು. ಇವರ ಜತೆಗೆ ಶೇಖರ್ ಕೂಡ ಈಜಲು ಇಳಿದಿದ್ದರು.
ಆದರೆ ಆ ಕೆರೆಯಲ್ಲಿ ಗುಂಡಿಗಳು ಇದ್ದಿದ್ದು ಇವರ ಗಮನಕ್ಕೆ ಬಂಂದಿರಲಿಲ್ಲ. ಈಜುತ್ತಾ ಮಕ್ಕಳು ಗುಂಡಿಯ ಕಡೆ ಹೋಗಿದ್ದಾರೆ. ಇದನ್ನ ಕಂಡ ಶೇಖರ್ ಇಬ್ಬರು ಮಕ್ಕಳನ್ನ ರಕ್ಷಿಸಲು ಮುಂದಾಗಿದ್ದಾರೆ. ಆದರೆ ಗುಂಡಿ ಆಳವಿದ್ದುದರಿಂದ ಮೂವರು ಆ ಗುಂಡಿಯಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಸುಮಾ ಮೂವರನ್ನ ರಕ್ಷಿಸಲು ಹೋಗಿ ತಾನು ಅದೇ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಂದ ಹಾಗೇ ಬೆಳಿಗ್ಗೆ ಮನೆಯಿಂದ ತೋಟದತ್ತ ತೆರಳಿದ್ದ ಮಕ್ಕಳು ಹಾಗು ದಂಪತಿ ಮಧ್ಯಾಹ್ನವಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಶಶಿಕಲಾ ಶೇಖರ್ ಮೊಬೈಲಿಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸುತ್ತಿರಲಿಲ್ಲವಾದ್ದರಿಂದ ಗಾಬರಿಗೊಂಡ ಶಶಿಕಲಾ ತೋಟದತ್ತ ಬಂದಿದ್ದಾರೆ.
ತೋಟದ ಸಮೀಪದ ಕೆರೆಯ ಬಳಿ ಬಂದಾಗ ತಮ್ಮ ಮಕ್ಕಳ ಬಟ್ಟೆ ಇರುವುದು ಕಂಡಿದೆ. ಆದರೆ ಮಕ್ಕಳು ಹಾಗೂ ಶೇಖರ್ ದಂಪತಿ ಕಂಡು ಬರಲಿಲ್ಲಾವಾದ್ದರಿಂದ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಕೆಲವರು ಕೆರೆಯಲ್ಲಿ ಹುಡುಕಾಟ ನಡೆಸಿ ನಾಲ್ವರ ಶವವನ್ನ ಹೊರ ತೆಗೆದಿದ್ದಾರೆ.
ದಂಪತಿಗಳಾದ ಶೇಖರ್ ಮತ್ತು ಸುಮಾ ಹಾಗೂ ಧನುಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಹಂಸಳ ಜೀವ ಇನ್ನು ಉಳಿದಿತ್ತು. ತಕ್ಷಣ ಆಸ್ಪತ್ರೆಗೆ ಹಂಸಳನ್ನು ಸಾಗಿಸಲಾಯಿತಾದರೂ ದಾರಿ ಮಧ್ಯೆ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತದೇಹಗಳನ್ನ ರಾಮನಗರದ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ ತನ್ನ ಚಿಕ್ಕಮ್ಮ ಮನೆಗೆ ಊಟಕ್ಕೆ ಅಂತ ಬಂದ ನವ ದಂಪತಿ ನೀರಿನಲ್ಲಿ ಮುಳುಗಿದರೆ, ಇತ್ತ ಏನನ್ನು ಅರಿಯದ ಮುದ್ದು ಮಕ್ಕಳು ತಮ್ಮ ಹೆತ್ತವರನ್ನ ಬಿಟ್ಟು ಬಾರದ ಲೋಕ ಸೇರಿದ್ದಾರೆ. ಇದರಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.