ನನಗೆ ನಶೆ ಬರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದೇಕೆ ಕುಮಾರಸ್ವಾಮಿ?
ರಾಮನಗರ, ಸೆಪ್ಟೆಂಬರ್ 2: ಡ್ರಗ್ಸ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್, ಕಾನೂನು ಬಾಹಿರ ಡ್ಯಾನ್ಸ್ ಬಾರ್ ನಡೆಸುತ್ತಿರುವವರು ಹಣ ಸಂಗ್ರಹಿಸಿ ನನ್ನ ಸರ್ಕಾರ ಪತನಗೊಳಿಸಲು ಹೊರಟಿತ್ತು ಎಂದು ಹೇಳಿದ್ದೇನೆ. ಸರ್ಕಾರ ಪತನ ಆಗಿದ್ದರ ಬಗ್ಗೆ ನಾನು ತುರುವೆಕೆರೆಯಲ್ಲಿ ಮಾತನಾಡಿದ್ದೇನೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
Recommended Video
ನಾನು ಮಾತನಾಡುವ ಪ್ರತಿ ಪದದಲ್ಲೂ ಗೊಂದಲವಿರುವುದಿಲ್ಲ, ನಾನು ನೇರವಾಗಿ ಮಾತನಾಡುವ ವ್ಯಕ್ತಿ. ನಾನು ಯಾವ ಬಿಜೆಪಿ ಮುಖಂಡನ ಹೆಸರನ್ನು ಹೇಳಿಲ್ಲ, ಬಿಜೆಪಿಯವರು ಕಳ್ಳನ ಮನಸ್ಸು ಹುಳ್ಳಗೆ ಅನ್ನೋ ತರ ಅವರು ಯಾಕೆ ಬೆನ್ನು ಕೆರೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿ ಸಹಕರಿಸುತ್ತಿಲ್ಲ
ಸಚಿವ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನನಗೆ ನಶೆ (ಮತ್ತು) ಬರಿಸಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಅಧಿಕಾರ ಇದ್ದಾಗಲೂ ಮತ್ತಿಲ್ಲ, ಬಿಟ್ಟಾಗಲು ಮತ್ತು(ನಶೆ) ಬರೋದಿಲ್ಲ. ಅಧಿಕಾರ ಬಂದಾಗ ಕೆಲವರಿಗೆ ಅಧಿಕಾರದ ನಶೆ ಇರುತ್ತದೆ. ಅಧಿಕಾರ ಎಂದೂ ಶಾಶ್ವತ ಅಲ್ಲ, ನಾನು ಅಧಿಕಾರ ಹಿಂದೆ ಅಂಟಿಕೊಂಡು ಕೂತವನಲ್ಲ ಎಂದು ತಿಳಿಸಿದರು.
ವಿಪಕ್ಷ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ
ರಾಜ್ಯದಲ್ಲಿ ನಡೆದ ಕೊರೊನಾ ಗೋಲ್ ಮಾಲ್ ಪ್ರಕರಣದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಪಕ್ಷ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಯಾವುದೇ ಆರೋಪ ಮಾಡಿದರೆ ಅದಕ್ಕೆ ದಾಖಲೆ ಇಡಬೇಕು. ಸರಿಯಾದ ದಾಖಲೆ ತೋರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದರು ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿದ್ದು ನಾನು, ಹೆಸರು ಮಾಡಿಕೊಂಡಿದ್ದು ಮಾತ್ರ ಕಾಂಗ್ರೆಸ್ ಪಕ್ಷ. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್, ರಾಜ್ಯ ಸರ್ಕಾರದ ವೈಫಲ್ಯ ತೋರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪರೋಕ್ಷವಾಗಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಗೆ ಟಾಂಗ್
ಚನ್ನಪಟ್ಟಣದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ಪಿಡಿಒ ವರ್ಗಾವಣೆ ದಂಧೆ ಮಾಡಲು ಹೊರಟಿದ್ದಾರೆ. ಅಧಿಕಾರಿಗಳಿಂದ ತಿಂಗಳ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಎಚ್ಡಿಕೆ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ನನ್ನ ಸಾಥ್ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಗೆ ಟಾಂಗ್ ನೀಡಿದರು.
ಮಾಜಿ ಸಿಎಂ ಎಚ್ಡಿಕೆಗೆ ಸಚಿವ ಸಿ.ಟಿ. ರವಿ ತಿರುಗೇಟು
ಕಿಂಗ್ ಪಿನ್ ಅರೆಸ್ಟ್ ಮಾಡಲು ಸರ್ಕಾರಕ್ಕೆ ದಿಟ್ಟತನ ಬೇಕು
ಮಂಗಳೂರು ಗಲಭೆ ಆಗಿ ವರ್ಷ ಆಯ್ತು, ತನಿಖೆ ನಡೆಯುತ್ತಲೇ ಇದೆ. ಮೊನ್ನೆ ಡಿ.ಜೆ ಹಳ್ಳಿ ಗಲಭೆ ಆಯ್ತು, ಅದೂ ತನಿಖೆ ನಡೆಯುತ್ತಲೇ ಇದೆ. ಈಗ ಡ್ರಗ್ಸ್ ದಂಧೆ ನಡೆದಿದೆ, ಅದು ಕೂಡ ತನಿಖೆಯಾಗುತ್ತಿದೆ. ಈ ಎಲ್ಲಾ ಘಟನೆಗಳ ತನಿಖೆ ಮಾಡುತ್ತಲೇ ಇದೆ ಅಷ್ಟೆ. ಆದರೆ ಈ ಘಟನೆಗಳ ಕಿಂಗ್ ಪಿನ್ ಅರೆಸ್ಟ್ ಮಾಡಲು ಸರ್ಕಾರಕ್ಕೆ ದಿಟ್ಟತನಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ನೇರ ಸವಾಲು ಎಸೆದರು.
ನಾನು ಮಾತನಾಡುವುದನ್ನು ಬಿಟ್ಟಿದ್ದೇನೆ
ದೇಶದಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದ್ದು, ಆರ್ಥಿಕತೆ ಸರಿದೂಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಏನಾಯ್ತು? ಕೇಂದ್ರದ ಹಣ ನಿಜವಾಗಲೂ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಆಪಾದನೆ ಮಾಡಿದರು.
ನನಗೆ 12 ವರ್ಷದಲ್ಲೇ 60 ವರ್ಷಗಳ ರಾಜಕೀಯ ಅನುಭವ ಆಗಿದೆ. ನಾನು ಮಾತನಾಡುವುದನ್ನು ಬಿಟ್ಟಿದ್ದು, ಮಾತನಾಡಿದರೆ ಸಾಕಷ್ಟು ವಿಷಯಗಳಿವೆ. ಯಾವುದೇ ಆರೋಪ ಮಾಡುವಾಗ ದಾಖಲೆ ಸಮೇತ ಇಡಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಳಿದರು.