ಬಿಎಸ್ವೈ ದೆಹಲಿ ಭೇಟಿ ಮೇಕೆದಾಟು ವಿಷಯಕ್ಕೋ? ರಾಜಕೀಯಕ್ಕೋ?: ಡಿಕೆಎಸ್ ಅನುಮಾನ
ರಾಮನಗರ, ಜುಲೈ 17: "ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದೆ. ಮೇಕೆದಾಟು ಯೋಜನೆ ಆಗಬೇಕೆಂದು ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ,'' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ತಿಳಿಸಿದರು.
ರಾಮನಗರದಲ್ಲಿ ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, "ಯೋಜನೆಗೆ ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದೆ. ನಾವು ಕುಡಿಯುವ ನೀರನ್ನಷ್ಟೆ ಬಳಕೆ ಮಾಡಿಕೊಳ್ಳಲಾಗುತ್ತದೆ,'' ಎಂದು ತಿಳಿಸಿದರು.
"ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಅಧಿಕಾರದಲ್ಲಿ ಇದೆ. ಮೇಕೆದಾಟು ವಿಷಯದಲ್ಲಿ ಸರ್ವ ಪಕ್ಷದವರನ್ನು ಕರೆದುಕೊಂಡು ಹೋದರು ಸಂತೋಷ, ಇಲ್ಲವಾದರೂ ಸಂತೋಷ. ನಮಗೆ ಮೇಕೆದಾಟು ಯೋಜನೆ ಆಗಬೇಕು ಅಷ್ಟೆ,'' ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
"ದೆಹಲಿಗೆ ಹೋಗಿದ್ದ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಯಾವ ವಿಚಾರದಲ್ಲಿ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಮೇಕೆದಾಟು ವಿಚಾರವಾಗಿಯೋ, ಇಲ್ಲಾ ರಾಜಕೀಯವಾಗಿಯೋ ಭೇಟಿ ಮಾಡಿದ್ದಾರೋ,'' ಎಂದು ಸಂಸದ ಡಿ.ಕೆ. ಸುರೇಶ್ ತಮ್ಮ ಅನುಮಾನ ವ್ಯಕ್ತಪಡಿಸಿದರು.
Recommended Video
"ಸಿಎಂ ಯಡಿಯೂರಪ್ಪ ಹಾಗೂ ನರೇಂದ್ರ ಮೋದಿ ಇಬ್ಬರೇ ಗೌಪ್ಯವಾಗಿ ಭೇಟಿಯಾಗಿರುವುದರಿಂದ ಏನ್ ಚರ್ಚೆಯಾಗಿದೆ ಎಂದು ನಮಗೆ ಗೊತ್ತಿಲ್ಲ. ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿರುವವರು ಇದ್ದಾರೆ, ಅವರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಮೋದಿ ಬಳಿ ಚರ್ಚೆ ಮಾಡಬೇಕಾಗಿತ್ತು,'' ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.