ಈಗಲ್ಟನ್ ರೆಸಾರ್ಟ್ನಿಂದ 920 ಕೋಟಿ ರೂ. ಮೌಲ್ಯದ ಜಮೀನು ವಶಪಡಿಸಿಕೊಂಡ ರಾಮನಗರ ಜಿಲ್ಲಾಡಳಿತ
ರಾಮನಗರ, ಸೆಪ್ಟೆಂಬರ್ 15: ಕಳೆದ 21 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿ ಸುಮಾರು 920 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಬಿಡದಿ ಬಳಿಯಿರುವ ಈಗಲ್ಟನ್ ರೆಸಾರ್ಟ್ನಿಂದ ರಾಮನಗರ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿರುವ ಐಷಾರಾಮಿ ಈಗಲ್ಟನ್ ರೆಸಾರ್ಟ್, ರಾಜಕಾರಣಿಗಳು ಸೇರಿದಂತೆ ಸೆಲಬ್ರಿಟಿಗಳ ನೆಚ್ಚಿನ ತಾಣ. ಇದೇ ರೆಸಾರ್ಟ್ನ ಮಾಲೀಕತ್ವ ಇರುವ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್, ಕೋಟ್ಯಾಂತರ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಕಳೆದ 21 ವರ್ಷಗಳ ಹಿಂದೆ ಕಬಳಿಸಿತ್ತು.
ಈಗಲ್ ಟನ್ ರೆಸಾರ್ಟ್ ಗೆ 982 ಕೋಟಿ ದಂಡ ಹಾಕಿದ್ದು ಏಕೆ?
ನ್ಯಾಯಾಲಯದ ಆದೇಶದಂತೆ ಈಗಲ್ಟನ್ ರೆಸಾರ್ಟ್ನ ಮಾಲೀಕತ್ವ ಇರುವ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್, ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಮೀನನ್ನು ರಾಮನಗರ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ಜಿಲ್ಲಾಡಳಿತ ವಶಕ್ಕೆ ಪಡೆದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಕಳೆದ ಹದಿನೈದು ದಿನದಿಂದ ಜಾಗವನ್ನು ಗುರುತಿಸಿ ಇವತ್ತು ಕಾಂಪೌಂಡ್ ನಿರ್ಮಾಣ ಕಾರ್ಯ ಶುರುವಾಗಿದೆ. ರಾಮನಗರ ಎಸಿ ಮಂಜುನಾಥ್, ತಹಶೀಲ್ದಾರ ವಿಜಯ್ ಕುಮಾರ್ ನೇತೃತ್ವದಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
106 ಎಕರೆ ಗೋಮಾಳ ನುಂಗಿದ್ದ ರೆಸಾರ್ಟ್
1995ರಲ್ಲಿ ಪ್ರವಾಸೋದ್ಯಮ ಕ್ಷೇತ್ರದಡಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಚಾಮುಂಡೇಶ್ವರಿ ಬಿಲ್ ಟೆಕ್ ಸಂಸ್ಥೆ ಬಿಡದಿ ಬಳಿ ಸುಮಾರು 400 ಎಕರೆ ಜಾಗದಲ್ಲಿ ಈಗಲ್ಟನ್ ರೆಸಾರ್ಟ್ ನಿರ್ಮಿಸಿ, ಗಾಲ್ಫ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿತ್ತು. ತನ್ನ ಐಷಾರಾಮಿ ಸವಲತ್ತುಗಳಿಂದ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿ ಹೆಸರು ಗಳಿಸಿದ್ದ ಈಗಲ್ಟನ್ ಗಾಲ್ಫ್ ರೆಸಾರ್ಟ್ ಸುಮಾರು 400 ಎಕರೆ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿ, ಈ ಪೈಕಿ 106 ಎಕರೆ ಸರ್ಕಾರಿ ಗೋಮಾಳದ ಭೂಮಿ ಒತ್ತುವರಿ ಮಾಡಿಕೊಂಡಿತ್ತು.
ಜಮೀನು ವಿವಾದಕ್ಕೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ರೆಸಾರ್ಟ್
ಈಗಲ್ಟನ್ ರೆಸಾರ್ಟ್ ತಾನು ಒತ್ತುವರಿ ಮಾಡಿಕೊಂಡಿದ್ದ 106 ಎಕರೆಯಲ್ಲಿ 28.33 ಎಕರೆ ಜಾಗವನ್ನು ಜಿಲ್ಲಾಡಳಿತಕ್ಕೆ ವಾಪಸ್ಸು ನೀಡಿತ್ತು ಹಾಗೂ ಇನ್ನುಳಿದ 77 ಎಕರೆ 19 ಗುಂಟೆ ಜಮೀನಿನ ವಿವಾದ ಹಲವು ಹಂತಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ಅಂತಿಮವಾಗಿ ರೆಸಾರ್ಟ್ ಜಮೀನು ಒತ್ತುವರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ 2014ರಲ್ಲಿ ಸುಪ್ರೀಂ ಕೋರ್ಟ್ ಒಂದು ಆದೇಶ ಹೊರಡಿಸಿತ್ತು. ಸಬ್ ಕಮಿಟಿ ರಚನೆ ಮಾಡಿ, ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಬೆಲೆ ನಿಗದಿ ಮಾಡಬೇಕು ಎಂದು ಆದೇಶಿಸಿತ್ತು.
2016-17ರಲ್ಲಿ ಸದನ ಸಮಿತಿ ವರದಿ ನೀಡಿದೆ
ಅದರಂತೆ 2016-17ರಲ್ಲಿ ಸದನ ಸಮಿತಿ ವರದಿ ನೀಡಿ, ಮಾರುಕಟ್ಟೆ ಮೌಲ್ಯದಂತೆ ಒತ್ತುವರಿ ಆಗಿರುವ ಜಾಗಕ್ಕೆ 920 ಕೋಟಿ ಹಣವನ್ನು ಪಾವತಿಸುವಂತೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ಗೆ ಸೂಚನೆ ನೀಡಿತ್ತು. ಒತ್ತುವರಿ ಜಮೀನಿನ ಮೌಲ್ಯದ ಹಣವನ್ನು ಸರ್ಕಾರಕ್ಕೆ ಪಾವತಿಸದೇ, ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
Recommended Video
ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಕಳೆದ ತಿಂಗಳು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸರ್ಕಾರಿ ಗೋಮಾಳದ ಜಾಗವನ್ನು ಒತ್ತುವರಿ ಮಾಡಿ, ಹಣವನ್ನು ಕಟ್ಟದೇ ಇಷ್ಟು ವರ್ಷಗಳ ಸರ್ಕಾರಿ ಜಾಗವನ್ನು ಬಳಸಿಕೊಂಡಿದ್ದ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ಗೆ ರಾಮನಗರ ಜಿಲ್ಲಾಡಳಿತ ಶಾಕ್ ನೀಡಿ, ಸರ್ಕಾರಿ ಜಾಗವನ್ನು ತನ್ನ ವಶಕ್ಕೆ ಪಡೆದಿದೆ.