ವಿವಾದಿತ ಶಿಲುಬೆಯನ್ನು ತೆರವುಗೊಳಿಸಿದ ರಾಮನಗರ ಜಿಲ್ಲಾಡಳಿತ
ರಾಮನಗರ, ಜೂನ್ 23: ಬೆಳ್ಳಂಬೆಳಿಗ್ಗೆ ರಾಮನಗರ ಜಿಲ್ಲಾಡಳಿತ ಕಾರ್ಯಚರಣೆ ನಡೆಸಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ, ವಿವಾದಿತ ಶಿಲುಬೆಯನ್ನು ತೆರವುಗೊಳಿಸಿರುವ ಘಟನೆ ರಾಮನಗರ ತಾಲ್ಲೂಕಿನ ಗೊಲ್ಲರ ಚೆನ್ನಯ್ಯನದೊಡ್ಡಿಯಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ ಕೂಗಳತೆಯ ದೂರದ ಗೊಲ್ಲರ ಚೆನ್ನಯ್ಯನದೊಡ್ಡಿ ಗ್ರಾಮದಲ್ಲಿರುವ ಹಾರ್ನ ಬೆಟ್ಟದಲ್ಲಿ ಅಕ್ರಮವಾಗಿ ನಿರ್ಮಾಣಮಾಡಿದ್ದ 15 ಅಡಿ ಎತ್ತರದ ಶಿಲುಬೆಯನ್ನು ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಇಂದು ಬೆಳಿಗ್ಗೆ ನೆಲಸಮ ಮಾಡಿದೆ.
ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸೆಬಾಸ್ಟಿಯನ್ ರಾಣಿ ಎನ್ನುವ ಮಹಿಳೆ ಅಕ್ರಮವಾಗಿ ಸುಮಾರು 15 ಅಡಿಗೂ ಹೆಚ್ಚು ಎತ್ತರದ ಶಿಲುಬೆ ಹಾಗೂ ಮೇರಿ ವಿಗ್ರಹವನ್ನು ಗೊಲ್ಲರ ಚೆನ್ನಯ್ಯನದೊಡ್ಡಿ ಗ್ರಾಮದಲ್ಲಿರುವ ಹಾರ್ನ ಬೆಟ್ಟದಲ್ಲಿ ನಿರ್ಮಾಣ ಮಾಡಿ, ಗೋಮಾಳದ ಸ್ವತ್ತನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿತ್ತು.
ಅಲ್ಲದೇ ಅಕ್ರಮ ಪ್ರವೇಶ ತೆರವುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಫೆಬ್ರವರಿ 25 ರಂದು ಜಿಲ್ಲಾಡಳಿತ ಸಂಕೀರ್ಣದ ಮುಂದೆ ಪ್ರತಿಭಟನೆಯನ್ನು ಮಾಡಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಅಕ್ರಮ ನಿರ್ಮಾಣವನ್ನು ತೆರವುಗೊಳಿಸದ ಜಿಲ್ಲಾಡಳಿತ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಜೇಂದ್ರ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಕೀಲ ಸುರೇಶ್.ಆರ್ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಅರುಣ್ ಸಿಂಗ್ ಉಚ್ಛ ನ್ಯಾಯಾಲಯದಲ್ಲಿ WP No: 6333/2020 (PIL) ರಂತೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಏಸು ಪ್ರತಿಮೆ ವಿರೋಧಿ ಹೋರಾಟಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ
ಹೈಕೋರ್ಟ್ ನ್ಯಾಯಾಧೀಶರು ಸದರಿ ಪ್ರಕರಣದ ಸಂಬಂಧ ಎದುರುದಾರರು ಹಾಗೂ ಜಿಲ್ಲಾಡಳಿತಕ್ಕೆ ಛೀಮಾರಿ ಹಾಕಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿದೆ.
ಈ ವಿಚಾರಕ್ಕೆ ಪ್ರತಿಕ್ರಯೆ ನೀಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಆರ್.ಸುರೇಶ್, ""ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ ಮಿಷನರಿಗಳು ವ್ಯಾಪಕ ಮತಾಂತರಕ್ಕೆ ಹುನ್ನಾರ ನಡೆಸಿವೆ. ಇಂತಹ ಹುನ್ನಾರಗಳ ವಿರುದ್ಧ ಹಿಂದು ಜಾಗರಣ ವೇದಿಕೆ ನಿರಂತರ ಹೋರಾಟ ನಡೆಸುತ್ತಿದ್ದು, ಇಂದು ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಕ್ರಿಶ್ಚಿಯನ್ ಮಿಷನರಿ ಬೆಟ್ಟದ ಮೇಲೆ ನಿರ್ಮಾಣ ಮಾಡಿದ್ದ 15 ಅಡಿ ಎತ್ತರದ ಶಿಲುಬೆಯನ್ನು ತೆರವುಗೊಳಿಸಿರುವುದು ಹಿಂದೂ ಜಾಗರಣಾ ವೇದಿಕೆಯ ಹೋರಾಟಕ್ಕೆ ಸಿಕ್ಕ ಜಯ ಎಂದರು.