ರಾಮನಗರ ದಿಶಾ ಮೀಟಿಂಗ್: ಶಾಸಕರು, ಜಿಲ್ಲಾಧಿಕಾರಿ ನಡುವೆ ವಾಗ್ವಾದ
ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನಡುವಿನ ಮಾತಿನ ಜಟಾಪಟಿಗೆ ಜಿಲ್ಲಾ ಪಂಚಾಯಿತಿ ಭವನದಲ್ಲಿ ನಡೆದ ದಿಶಾ ಸಭೆ ಸಾಕ್ಷಿಯಾಯಿತು.
ರಾಮನಗರ, ಜನವರಿ 18: ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನಡುವಿನ ಮಾತಿನ ಜಟಾಪಟಿಗೆ ಜಿಲ್ಲಾ ಪಂಚಾಯಿತಿ ಭವನದಲ್ಲಿ ನಡೆದ ದಿಶಾ ಸಭೆ ಸಾಕ್ಷಿಯಾಯಿತು.
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ದಿಶಾ ಸಭೆಯಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ನಡುವೆ ಮಾತಿನ ಸಮರವೇ ನಡೆಯಿತು.
ಜಿಲ್ಲೆಯಲ್ಲಿ ಜನಪ್ರತಿನಿಧಿಗಳನ್ನ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಮಾಡಿ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮೇಲೆ ಗರಂ ಆದರು.ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯೂ ಕೊಡಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು ಬಾನಂದೂರು ಮತ್ತು ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಈ ಎರಡೂ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು.
ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಹಿತಿ ಕೊಡಿ, ನಿಮ್ಮ ಜೊತೆಯಲ್ಲಿ ಬೇರೆ ಯಾರೋ ಬರ್ತಾರೆ ಅವರ್ಯಾರು ಎಂದು ಪ್ರಶ್ನೆ ಮಾಡಿದ ಶಾಸಕ ಎ.ಮಂಜುನಾಥ್, ಈ ವೇಳೆ ಶಾಸಕರ ಪ್ರಶ್ನೆಗೆ ತಬ್ಬಿಬ್ಬಾದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸಭೆಯ ವೇದಿಕೆಯಲ್ಲೇ ಸಿಡಿಮಿಡಿಗೊಂಡು ತಮ್ಮ ಕೋಪ ವ್ಯಕ್ತಪಡಿಸಿದರು.
ಶಾಸಕ ಎ.ಮಂಜು ಅರೋಪಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಡಿ.ಕೆ.ಸುರೇಶ್ ರವರಿಗೆ ಸಬೂಬು ನೀಡಲು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮುಂದಾದರು.
ಆದರೆ ಡಿ.ಕೆ.ಸುರೇಶ್ ಅವರು, ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕಾದ್ದು ನಿಮ್ಮ ಕರ್ತವ್ಯ, ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸುವಂತೆ ಸಂಸದ ಸುರೇಶ್ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ರವರಿಗೆ ತಿಳಿ ಹೇಳಿದರು.