ರಾಮನಗರಕ್ಕಿಲ್ಲ ಕೊರೊನಾ, ಭಯ ಬೇಡ ಎಂದ ಜಿಲ್ಲಾಧಿಕಾರಿ
ರಾಮನಗರ, ಮಾರ್ಚ್ 18: ಕೊರೊನಾ ವೈರಸ್ ಶಂಕಿತರು ಎಂದು ಅನುಮಾನಿಸಲಾಗಿದ್ದ ಇಬ್ಬರಿಗೂ ಯಾವುದೇ ವೈರಸ್ ಸೋಂಕು ಪತ್ತೆಯಾಗಿಲ್ಲ ಹಾಗಾಗಿ ಜಿಲ್ಲೆಯ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದ 22 ವರ್ಷದ ಯುವತಿ ಜರ್ಮನಿಯಿಂದ 4 ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದರು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಇತ್ತೀಚೆಗೆ ಇಂಡೋನೇಷಿಯಾ ಮತ್ತು ಬಾಲಿಗೆ ಭೇಟಿ ನೀಡಿ ಮಾಗಡಿಗೆ ಮರಳಿದ್ದ 33 ವರ್ಷದ ಯುವಕನಿಗೆ ಜ್ವರ ಮತ್ತು ಕೆಮ್ಮಿನಿಂದ ಮಾಗಡಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಇಬ್ಬರು ಶಂಕಿತರ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ವರದಿಯಲ್ಲಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಜನರಲ್ಲಿದ್ದ ಅತಂಕ ದೂರವಾಗಿದೆ.
ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದ ಇಲ್ಲಿಯವರೆಗೆ ವಿದೇಶದಿಂದ ಜಿಲ್ಲೆಗೆ 68 ಜನ ಬಂದಿದ್ದಾರೆ, ಅವರಲ್ಲಿ 33 ಜನ ಇನ್ನೂ ಐಸೋಲೇಷನ್ ನಲ್ಲಿದ್ದಾರೆ. ಉಳಿದ 35 ಮಂದಿ 14 ದಿನಗಳ ಐಸೋಲೇಷನ್ ನಿಂದ ಮನೆಗೆ ವಾಪಾಸ್ಸಾಗಿದ್ದಾರೆ.
ಇದುವರೆಗೆ ಯಾರಲ್ಲೂ ಕೊರೊನಾ ವೈರಸ್ ನ ಸೋಂಕು ಕಾಣಿಸಿಕೊಂಡಿಲ್ಲ, ಆದರು ಜಿಲ್ಲಾಡಳಿತ ಪ್ರತಿ ಕೇಸ್ ಮೇಲೆ ನಿಗಾ ಇಟ್ಟಿದ್ದೇವೆ, ಸಂಶಯವಿರುವ ಜನರನ್ನು ನಿಗಾದಲ್ಲಿರಿಸಿದ್ದೇವೆ ಎಂದು ಮಾಹಿತಿ ನೀಡಿದರು.