ಸ್ವಾತಂತ್ರ್ಯ ಹೋರಾಟಗಾರರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದ ರಾಮನಗರ ಜಿಲ್ಲಾಧಿಕಾರಿ
ರಾಮನಗರ, ಆಗಸ್ಟ್ 14: ಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯನ್ನು ಹೊಗಲಾಡಿಸಲು ಅಖಂಡ ಭಾರತದಲ್ಲಿ ಹಲವು ಹೋರಾಟಗಳು, ಸತ್ಯಾಗ್ರಹಗಳು ನಡೆದವು. ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗನ್ನು ಮಾಡಿದರು. ಅದರ ಫಲವಾಗಿ ಆಗಸ್ಟ್ 15, 1947 ರಂದು ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ದೊರಕಿತು.
ಹಲವು ಸಭೆ, ಚರ್ಚೆಗಳ ನಂತರ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನವನ್ನಾಗಿ ತುಂಡರಿಸಿ, ಸ್ವಾತ್ರಂತ್ರ್ಯ ನೀಡಲಾಯಿತು. ಅಂದಿನಿಂದ ಭಾರತ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿಕೊಳ್ಳುತ್ತಿದೆ.
ಭಾರತೀಯರು ಎಂದೂ ಮರೆಯದ ದೇಶ ವಿಭಜನೆಯ ಕರಾಳ ದುರಂತಗಳು
75ನೇ ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ರಾಮನಗರ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರನ್ನು ಗೌರವಿಸಲಾಯಿತು.
ಕನಕಪುರ ತಾಲ್ಲೂಕಿನ ಇಬ್ಬರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಂ.ಎಸ್. ಕರಿಯಪ್ಪ, ಮತ್ತು ಎನ್. ಲಿಂಗಯ್ಯರ ಮನೆಗೆ ರಾಮನಗರ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತೆರಳಿ ಜಿಲ್ಲಾಡಳಿತದ ವತಿಯಿಂದ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಕಾಲಿಗೆ ನಮಿಸಿ, ಗೌರವಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ ಕುಳಿತು ಅವರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಅನುಭವ ಕುರಿತ ಮಾತುಗಳನ್ನು ಆಲಿಸಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರ ಪ್ರತಿಕ್ರಿಯೆ, ಚಳವಳಿ ಕಾವು, ಸೆರೆವಾಸ, ಅಂದಿನ ಪರಿಸ್ಥಿತಿ, ಜೀವನಶೈಲಿ, ಸಿಗುತ್ತಿದ್ದ ಸೌಲಭ್ಯಗಳು, ಸ್ವಾತಂತ್ರ್ಯದ ನಂತರ ಆದ ಬದಲಾವಣೆಗಳು ಕುರಿತು ಸ್ವಾತಂತ್ರ ಹೋರಾಟಗಾರರು ತಮ್ಮ ಅನುಭವವನ್ನು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಸ್ವಾತಂರತ್ರ್ಯ ಹೋರಾಟಗಾರೊಂದಿಗೆ ಮೆಲುಕು ಹಾಕಿದರು.
ಸ್ವಾತಂತ್ರ್ಯ ಹೋರಾಟಗಾರರು ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಚಳವಳಿಗೆ ತಾವು ಧುಮುಕಿದ ಬಗ್ಗೆ, ಜೈಲು ವಾಸದಲ್ಲಿ ಅನುಭವಿಸಿದ ಕಷ್ಟಗಳನ್ನು, ಒಂದೇ ಕೊಠಡಿಯಲ್ಲಿ ಹೆಚ್ಚಿನ ಜನರನ್ನು ಬಂಧಿಸಿದಾಗ ಉಸಿರಾಡಲು ಕಷ್ಟ ಪಟ್ಟ ಅನುಭವವನ್ನು ವಿಸ್ತಾರವಾಗಿ ವಿವರಿಸಿದರು. ಹೋರಾಟದ ಕಿಚ್ಚು ಕಾರಣವಾಗಲು ಪ್ರೇರೇಪಿತವಾದ ಸಂಗತಿಗಳ ಬಗ್ಗೆಯೂ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಸ್ವಾತಂತ್ರ್ಯ ಸಂಗ್ರಾಮದ ರಾಮನಗರ ಜಿಲ್ಲೆಯ ಹೋರಾಟದ ನೇತಾರರು ಹಂಚಿಕೊಂಡ ಅನುಭವದ ನುಡಿಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ನಿಮ್ಮ ಅನುಭವವೇ ನಮ್ಮೆಲ್ಲರಿಗೂ ಸ್ಪೂರ್ತಿ, ನಿಮ್ಮ ಜೀವನ ಮೌಲ್ಯ ಆದರ್ಶಗಳು ಎಲ್ಲರಿಗೂ ಮುನ್ನೆಡೆಯಲು ಸಹಕಾರಿಯಾಗಿದೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಇಂತಹ ಅಮೂಲ್ಯ ವಿಶೇಷ ಸಂದರ್ಭದ ಆಚರಣೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜಿಲ್ಲೆಯ ಹಿರಿಯ ಚೇತನ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸುವುದು ಸರ್ಕಾರದ ಉದ್ದೇಶವಾಗಿದೆ.
ಸಾರ್ವಜನಿಕರು ಪ್ರತಿದಿನ ತಮ್ಮ ಸ್ವಂತ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ತಿಂಗಳಲ್ಲಿ ಒಂದು ಎರಡು ದಿನ ಸಮಾಜಕ್ಕೆ ಕೊಡುಗೆ ನೀಡಬೇಕು. ಸಸಿ ನೆಡುವುದು, ಸ್ವಚ್ಛತೆಯಲ್ಲಿ ಭಾಗವಹಿಸುವುದು ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಯುವ ಜನತೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಕರೆ ನೀಡಿದರು.
ರಾಮನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವ ಸಂದರ್ಭದಲ್ಲಿ ಕನಕಪುರ ತಹಶೀಲ್ದಾರ ವಿಶ್ವನಾಥ್ ಉಪಸ್ಥಿತರಿದ್ದರು.