ನಿತ್ಯಾನಂದ ಸ್ವಾಮಿ ವಿರುದ್ಧ ಸರ್ಚ್ ವಾರಂಟ್ ಹೊರಡಿಸಿದ ರಾಮನಗರ ನ್ಯಾಯಾಲಯ
ರಾಮನಗರ, ಫೆಬ್ರವರಿ 27: ವಿವಾದಿತ ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧ ಸರ್ಚ್ ವಾರೆಂಟ್ ಜಾರಿ ಮಾಡಿ ರಾಮನಗರದ 3 ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಆದೇಶ ಹೊರಡಿಸಿದ್ದಾರೆ.
ಆರತಿ ರಾವ್ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಆರೋಪಿ ನಿತ್ಯಾನಂದ ಸ್ವಾಮಿ ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ 19 ರಂದು ನಿತ್ಯಾನಂದ ಸ್ವಾಮಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿ, ಜಾಮೀನು ಕೂಡ ರದ್ದು ಮಾಡಿತ್ತು.
ಬಿಡದಿ ನಿತ್ಯಾನಂದ ಸ್ವಾಮಿ ವಿರುದ್ಧ ರಾಮನಗರ ಜಿಲ್ಲಾ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್
ಇದರ ಬೆನ್ನಲ್ಲೇ ನ್ಯಾಯಾಲಯ ಇಂದು ಸಿಓಡಿ ಅಧಿಕಾರಿಗಳ ಮನವಿ ಮೇರೆಗೆ ಸರ್ಚ್ ವಾರೆಂಟ್ ಜಾರಿ ಮಾಡಿದೆ. ನಿತ್ಯಾನಂದ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲದ ಕಾರಣ, ಸಿಒಡಿ ಅಧಿಕಾರಿಗಳು ಇಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಸಿಓಡಿ ಅಧಿಕಾರಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಂಧನದ ಜೊತೆಗೆ ಸರ್ಚ್ ವಾರೆಂಟ್ ಕೂಡಾ ಜಾರಿ ಮಾಡಿದ್ದಾರೆ.
ಮೂವರು ಸಿಓಡಿ ಅಧಿಕಾರಿಗಳ ತಂಡ ಇಂದು ರಾಮನಗರ ಕೋರ್ಟ್ ಗೆ ಹಾಜರಾಗಿ ಮನವಿ ಮಾಡಿದ್ದರು. ಅಧಿಕಾರಿಗಳ ಮನವಿಗೆ ಸ್ಪಂದಿಸಿದ ರಾಮನಗರ ಜಿಲ್ಲಾ ಕೋರ್ಟ್ ಸರ್ಚ್ ವಾರೆಂಟ್ ಜಾರಿ ಮಾಡಿದ್ದು, ಈ ವಾರೆಂಟ್ ಗೆ ಯಾವುದೇ ಕಾಲಮಿತಿ ಇರುವುದಿಲ್ಲ ಎಂದು ತಮ್ಮ ಅದೇಶದಲ್ಲಿ ಉಲ್ಲೇಖಿಸಿದ್ದಾರೆ.
ನಿತ್ಯಾನಂದ ಸ್ವಾಮಿಗೆ ಸಂಕಷ್ಟ: 10 ವರ್ಷದ ಹಿಂದೆ ನೀಡಿದ್ದ ಜಾಮೀನು ರದ್ದು
ಇನ್ನು ನಿತ್ಯಾನಂದ ಸ್ವಾಮಿ ಬಂಧನಕ್ಕೆ ಬಲೆ ಬೀಸಿರುವ ಸಿಒಡಿ ಅಧಿಕಾರಿಗಳು, ನಿತ್ಯಾನಂದ ಸ್ವಾಮಿಗೆ ಜಾಮೀನು ನೀಡಿದ್ದ ವ್ಯಕ್ತಿಯನ್ನು ಸಹ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.