ಅದ್ಧೂರಿಯಾಗಿ ಸಮಾಪ್ತಿ ಆಯಿತು ರಾಮನಗರದ ಚಾಮುಂಡಿ ದೇವಿ ಕರಗ
ರಾಮನಗರ, ಜುಲೈ 24: ಸಪ್ತಗಿರಿ ನಗರಿ, ರೇಷ್ಮೆನಗರಿ ಖ್ಯಾತಿಯ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ- ಬುಧವಾರ ಅದ್ಧೂರಿಯಾಗಿ ಜರುಗಿತು. ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ಈ ಕರಗ ಮಹೋತ್ಸವಕ್ಕೆ ಜಿಲ್ಲೆಯಿಂದ ಅಲ್ಲದೇ ರಾಜ್ಯದ ವಿವಿಧೆಡೆಯಿಂದ ಭಕ್ತರ ದಂಡು ಹರಿದು ಬಂದಿತ್ತು.
ಚಾಮುಂಡೇಶ್ವರಿ ಕರಗ ಪ್ರಯುಕ್ತ ನಗರದಾದ್ಯಂತ ತಳಿರು ತೋರಣ, ದೀಪಾಲಂಕಾರಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು. ರಾತ್ರಿಯಿಡೀ ಅಮ್ಮನವರ ಕರಗ ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ, ಬುಧವಾರ ಬೆಳಗಿನ ಜಾವ ಕೊಂಡ ಹಾಯ್ದು, ದೇವಾಲಯ ಪ್ರವೇಶ ಮಾಡಿತು.
ತಾಯಿಯ ಕರಗವು ಕೊಂಡ ಹಾಯ್ದ ಬಳಿಕ, ಭಕ್ತರು ತಮಗೆ ಇರುವ ಕಷ್ಟಗಳನ್ನು ಪರಿಹರಿಸು ತಾಯಿ ಎಂದು ಬೇಡಿಕೊಂಡು, ಅಗ್ನಿ ಕೊಂಡಕ್ಕೆ ಉಪ್ಪು, ಎಳ್ಳು ಹಾಗೂ ಮೆಣಸು ಕಾಳುಗಳನ್ನು ಹಾಕಿ ಬೇಡಿಕೊಂಡು, ಹರಕೆ ತೀರಿಸಿದರು.
ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ
ರಾಮನಗರದಲ್ಲಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲುಕೋಟೆಯ ಪ್ರತಾಪ್ಸಿಂಗ್ ಎಂಬುವರು ಸ್ಥಾಪಿಸಿದ್ದು ಎನ್ನುವ ಇತಿಹಾಸವಿದೆ. ಇನ್ನು ಮಕ್ಕಳಿಲ್ಲದ ಪ್ರತಾಪ್ ಸಿಂಗ್ ಕನಸಿನಲ್ಲಿ ಬಂದ ಚಾಮುಂಡೇಶ್ವರಿ ದೇವಿ, ಗುಹೆಯಲ್ಲಿರುವ ವಿಗ್ರಹವನ್ನು ತಂದು ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನಗೆ ಮಕ್ಕಳ ಭಾಗ್ಯ ಕರುಣಿಸುವುದಾಗಿ ಹಾಗೂ ಭಕ್ತರ ಇಷ್ಟಾರ್ಥ ಪೂರೈಸಲು ಇಲ್ಲೇ ನೆಲೆಸುತ್ತೇನೆ ಎಂದು ಆಜ್ಞೆ ಮಾಡಿದಳಂತೆ ಎಂಬುದು ಪ್ರತೀತಿ.
ಅಂದಿನಿಂದಲೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಇಲ್ಲಿಗೆ ಆಗಮಿಸಿ, ಪಾರ್ಥನೆ ಸಲ್ಲಿಸುತ್ತಾರೆ. ಅಲ್ಲದೇ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದಂದು ಇಲ್ಲಿ ಅದ್ಧೂರಿ ಕರಗ ಮಹೋತ್ಸವ ನಡೆಸಲಾಗುತ್ತದೆ. ಇನ್ನು ಚಾಮುಂಡೇಶ್ವರಿ ದೇವಿ ಸೇರಿದಂತೆ ವಿವಿಧ ಎಂಟು ದೇವತೆಗಳ ಕರಗ ಮಹೋತ್ಸವ ಸಹ ಜರುಗಿತು.
ಜನರು ಭಕ್ತಿಭಾವದಿಂದ ಇಕ್ಕೆಲಗಳಲ್ಲಿ, ಮಹಡಿಗಳ ಮೇಲೆ ನಿಂತು ವೀಕ್ಷಿಸಿದ್ದಲ್ಲದೇ ಕರಗ ಹೊತ್ತವರಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಆಷಾಢ ಮಾಸದಲ್ಲಿ ನಡೆಯುವ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ನಾಡಿನ ವಿವಿಧ ಬಾಗಗಳಿಂದ ಭಕ್ತಾದಿಗಳ ದಂಡೇ ಆಗಮಿಸಿತ್ತು. ಎರಡು ದಿನಗಳಿಂದ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಾರಥ್ಯದ ರಸ ಸಂಜೆ ಕಾರ್ಯಕ್ರಮ ಜನರ ಮನೆಸೂರೆಗೊಂಡಿತು.