ರಾಮನಗರ ಚುನಾವಣೆ : ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೆ ಆಸಕ್ತಿಯೇ ಇಲ್ಲ!
ರಾಮನಗರ, ಅಕ್ಟೋಬರ್ 24 : ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಎಂಬುದು ಅದಕ್ಕೆ ಕಾರಣ.
ನವೆಂಬರ್ 3ರಂದು ರಾಮನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಆದರೆ, ಕಾಂಗ್ರೆಸ್ ನಾಯಕರು ಚುನಾವಣೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಜೆಡಿಎಸ್ ಕ್ಷೇತ್ರವನ್ನು ಕಳೆದುಕೊಳ್ಳಲಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತಂತ್ರ ಬದಲು
ರಾಮನಗರ ಚುನಾವಣಾ ಕಣದಲ್ಲಿ ಏಳು ಅಭ್ಯರ್ಥಿಗಳಿದ್ದಾರೆ. ಆದರೆ, ಅನಿತಾ ಕುಮಾರಸ್ವಾಮಿ ಮತ್ತು ಬಿಜೆಪಿಯ ಎಲ್.ಚಂದ್ರಶೇಖರ್ ಅವರ ನಡುವೆ ಪ್ರಬಲ ಪೈಪೋಟಿ ಇದೆ. ಆದರೆ, ಕಾಂಗ್ರೆಸ್ ನಾಯಕರ ಅಸಮಾಧಾನ ಬಿಜೆಪಿಗೆ ವರವಾಗಲಿದೆಯೇ? ಕಾದು ನೋಡಬೇಕು.
ರಾಮನಗರ ಉಪ ಚುನಾವಣೆ : ಕಾಂಗ್ರೆಸ್-ಜೆಡಿಎಸ್ ಮಹತ್ವದ ಸಭೆ
ರಾಮನಗರದಲ್ಲಿ 2,06,982 ಮತದಾರರು ಇದ್ದಾರೆ. ಇವರಲ್ಲಿ1,04,019 ಮಹಿಳೆಯರು. 25 ಇತರೆ ಮತಗಳು ಸಹ ಇವೆ. ನವೆಂಬರ್ 3 ರಂದು ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ....
ರಾಮನಗರ ಉಪ ಚುನಾವಣೆ : ನಿಟ್ಟುಸಿರು ಬಿಟ್ಟ ಕಾಂಗ್ರೆಸ್, ಜೆಡಿಎಸ್!
ಜೆಡಿಎಸ್ ಜೊತೆ ಮೈತ್ರಿ
ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್-ಜೊತೆ ಮೈತ್ರಿ ಮಾಡಿಕೊಂಡ ಕಾರಣ ಜಿಲ್ಲಾ ಕಾಂಗ್ರೆಸ್ ಘಟಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿರುದ್ಧ ಅಸಮಾಧಾನಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ಜಿಲ್ಲಾ ಘಟಕದ ಅಪೇಕ್ಷೆಯಾಗಿತ್ತು. ಸಿ.ಎಂ.ಲಿಂಗಪ್ಪ ಅವರು ಪ್ರಚಾರ ಕಣದಿಂದ ದೂರವಾಗಿದ್ದು, ಅವರನ್ನು ಬಳ್ಳಾರಿಗೆ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಿದೆ.
ನಮ್ಮನ್ನು ಕರೆದಿಲ್ಲ
ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ ಅವರು, 'ಅನಿತಾ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವಾಗ ನಮ್ಮನ್ನು ಆಹ್ವಾನಿಸಿಲ್ಲ. ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ' ಎಂದು ಆರೋಪ ಮಾಡಿದ್ದಾರೆ.
ತನ್ವೀರ್ ಸೇಠ್ ಪ್ರಚಾರ
ರಾಮನಗರದಲ್ಲಿ ಗೆಲ್ಲಲು ಅಲ್ಪ ಸಂಖ್ಯಾತ ಮತಗಳನ್ನು ಪಡೆಯುವುದು ಮುಖ್ಯ. ಕಾಂಗ್ರೆಸ್ ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಎಂದು ಸೂಚಿಸಿದೆ. ಆದರೆ, ಅವರು ಮಂಗಳವಾರದ ತನಕ ಪ್ರಚಾರಕ್ಕೆ ಆಸಕ್ತಿ ತೋರಿಸಿರಲಿಲ್ಲ. ಬುಧವಾರದಿಂದ ಪ್ರಚಾರ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕ ಹೇಳಿತ್ತು.
ಬಿಜೆಪಿಗೆ ಸಹಕಾರಿ
ಜೆಡಿಎಸ್ ನಾಯಕರು ಹೇಳುವ ಪ್ರಕಾರ ಕಾಂಗ್ರೆಸ್ ನಾಯಕರ ವರ್ತನೆಯಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರಿಗೆ ಸಹಾಯಕವಾಗಲಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿರುವ ಎಲ್.ಚಂದ್ರಶೇಖರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಹಲವು ಬೆಂಬಲಿಗರು ಇದ್ದಾರೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರು ಎರಡನೇ ಹಂತದ ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.