ರಾಮನಗರ ಉಪ ಚುನಾವಣೆ : ಮಹತ್ವದ ಸಭೆ ನಡೆಸಿದ ಸದಾನಂದ ಗೌಡರು!
ರಾಮನಗರ, ಅಕ್ಟೋಬರ್ 12 : ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಮಹತ್ವದ ಸಭೆ ಶುಕ್ರವಾರ ನಡೆಯಿತು. ಅಕ್ಟೋಬರ್ 14ರಂದು ಉಪ ಚುನಾವಣೆ ಅಭ್ಯರ್ಥಿಯನ್ನು ಪಕ್ಷ ಘೋಷಣೆ ಮಾಡಲಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಬೆಂಗಳೂರು ನಗರದ ಹೊರವಲಯದಲ್ಲಿರುವ ಪಕ್ಷದ ಮುಖಂಡ ರುದ್ರೇಶ್ ಅವರ ನಿವಾಸದಲ್ಲಿ ಸದಾನಂದ ಗೌಡರು ಶುಕ್ರವಾರ ಮಧ್ಯಾಹ್ನ ಮಹತ್ವದ ಸಭೆ ನಡೆಸಿದರು.
ರಾಮನಗರ ಚುನಾವಣೆ : ಸಿ.ಎಂ.ಲಿಂಗಪ್ಪ v/s ದೇವೇಗೌಡ ಕುಟುಂಬದ ಹೋರಾಟ
ರಾಮನಗರ ಉಪ ಚುನಾವಣೆಗೆ ಎಲ್.ಚಂದ್ರಶೇಖರ್, ಸಿ.ಪಿ.ಯೋಗೇಶ್ವರ ಮತ್ತು ರುದ್ರೇಶ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಇಂದಿನ ಸಭೆಯ ಬಳಿಕ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಹೆಸರು ಪಟ್ಟಿಯಿಂದ ಹೊರ ಹೋಗಿದೆ.
ಕಮಲಕ್ಕೆ ಕೈ ತೆನೆ ಒಡಕಿನ ಲಾಭ ಪಡೆದ ಕಮಲ, ಲಿಂಗಪ್ಪರ ಮಗ ಬಿಜೆಪಿಗೆ
ಉಪ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಒಮ್ಮತದ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಕ್ಟೋಬರ್ 14ರಂದು ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಮನಗರ : ಅನಿತಾ ಕುಮಾರಸ್ವಾಮಿ ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ
ಪಕ್ಷ ಬಲಿಷ್ಠವಾಗಲಿದೆ
ಸಭೆಯ ಬಳಿಕ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, 'ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವ ಹೊಂದಿಲ್ಲ ಎಂಬ ಆರೋಪವಿದೆ. ಅದನ್ನು ಈ ಚುನಾವಣೆಯಲ್ಲಿ ದೂರ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಲು ತಂತ್ರ ರೂಪಿಸಿದ್ದೇವೆ. ಅಕ್ಟೋಬರ್ 14ರಂದು ನಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ' ಎಂದು ಹೇಳಿದರು.
20 ಮನೆಗಳ ಜವಾಬ್ದಾರಿ
'ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡುತ್ತೇವೆ. ರಾಮನಗರ ಕ್ಷೇತ್ರದಲ್ಲಿ 266 ಬೂತ್ಗಳಿವೆ. ಪ್ರತಿ ಕಾರ್ಯಕರ್ತನಿಗೆ 20 ಮನೆಗಳ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯವನ್ನು ತಿಳಿಸಿ ಚುನಾವಣಾ ಪ್ರಚಾರ ಮಾಡಲಾಗುತ್ತದೆ. ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ಕಣಕ್ಕಿಳಿಯಲಿದ್ದೇವೆ' ಎಂದು ಸದಾನಂದ ಗೌಡರು ತಿಳಿಸಿದರು.
ಅನಿತಾ ಕುಮಾರಸ್ವಾಮಿ ಎದುರಾಳಿ ಯಾರು?
ರಾಮನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಎಲ್.ಚಂದ್ರಶೇಖರ್, ರುದ್ರೇಶ್ ಅವರ ಹೆಸರು ಮುಂಚೂಣಿಯಲ್ಲಿದೆ. ಅಕ್ಟೋಬರ್ 14ರಂದು ಅಭ್ಯರ್ಥಿ ಘೋಷಣೆಯಾಗಲಿದೆ.
ಕಾಂಗ್ರೆಸ್ ನಾಯಕ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಸೇರಿದ್ದಾರೆ. ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ
ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅಷ್ಟು ಸುಲಭವಲ್ಲ. ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚು, ಕಾಂಗ್ರೆಸ್ ಸಹ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ ರಾಮನಗರ. ಆದ್ದರಿಂದ, ಯಾರೇ ಅಭ್ಯರ್ಥಿಯಾದರೂ ಗೆಲುವು ಸಾಧಿಸಲು ಕಷ್ಟ ಪಡಬೇಕು.
ಬಂಡಾಯದ ಭಯ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ರಾಮನಗರ ಚುನಾವಣೆ ಎದುರಿಸುತ್ತಿವೆ. ಆದರೆ, ಮೈತ್ರಿಗೆ ಬಂಡಾಯದ ಭಯ ಉಂಟಾಗಿದೆ.
ಇಕ್ಬಾಲ್ ಹುಸೇನ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದಾರೆ. 2018ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿದ್ದ ಇಕ್ಬಾಲ್ ಅವರು 69990 ಮತಗಳನ್ನು ಪಡೆದಿದ್ದರು.
ಸಚಿವ ಡಿ.ಕೆ.ಶಿವಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬಾರದು ಎಂದು ಇಕ್ಬಾಲ್ ಅವರಿಗೆ ಸೂಚನೆ ಕೊಟ್ಟಿದ್ದಾರೆ.