ರಾಮನಗರದತ್ತ ಸುಳಿಯದ ಬಿಜೆಪಿ ನಾಯಕರು: ಕಾರ್ಯಕರ್ತರು ಕಂಗಾಲು
ಬೆಂಗಳೂರು, ಅಕ್ಟೋಬರ್ 23: ವಿಧಾನಸಭಾ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಅಭ್ಯರ್ಥಿ ಪರ ಬಿಜೆಪಿಯ ಯಾವುದೇ ಪ್ರಮುಖ ನಾಯಕರು ಇಲ್ಲಿಯವರೆಗೆ ಪ್ರಚಾರದಲ್ಲಿ ಭಾಗಿಯಾಗದಿರುವುದು ರಾಮನಗರದ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಧಾನ ಮೂಡಿಸಿದೆ.
ಅಷ್ಟೇ ಅಲ್ಲ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಕಣದಿಂದ ಹಿಂದೆ ಸರಿದಿದೆಯೇ ಎಂಬ ಆತಂಕ ಕೂಡ ಕಾರ್ಯಕರ್ತರಲ್ಲಿ ಮಡುಗಟ್ಟಿದೆ. ಇದಕ್ಕೆ ಸಾಕ್ಷಿಯೆಂಬಂತೆ ರಾಮನಗರ ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳೂ ಸೇರಿದಂತೆ ರಾಜ್ಯದ ಯಾವುದೇ ಬಿಜೆಪಿ ನಾಯಕರು ಇಲ್ಲಿಯವರೆಗೆ ಕ್ಷೇತ್ರಕ್ಕೆ ಕಾಲಿಡದಿರುವುದು ಬಿಜೆಪಿಯು ಕಣದಲ್ಲಿ ಹಿಂದುಳಿಯಲು ಕಾರಣವಾಗಿದೆ.
'ದೇವೇಗೌಡ, ಸಿದ್ದರಾಮಯ್ಯ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ'
ರಾಮನಗರದಲ್ಲಿ ಬಿಜೆಪಿ ಶಸ್ತ್ರತ್ಯಾಗ ಮಾಡುತ್ತದೆ ಎನ್ನುವ ಗುಮಾನಿ ಆರಂಭವಾಗಿದೆ. ನಾಮಪತ್ರ ಸಲ್ಲಿಸಿ ಹೋದ ಬಿಜೆಪಿ ಮುಖಂಡರು ನಾಪತ್ತೆಯಾಗಿದ್ದಾರೆ, ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಎಂ ರುದ್ರೇಶ್ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲವೆಡೆ ಮಾತ್ರ ಪ್ರಚಾರ ನಡೆಸಿದ್ದು ಬಿಟ್ಟರೆ ಮತಬೇಟೆಯಲ್ಲಿ ನಿರುತ್ಸಾಹ ತೋರಿದ್ದಾರೆ.ನೆಪ ಮಾತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯಾ ಬಿಜೆಪಿ ಎಂದು ಕೇಳುವಂತಾಗಿದೆ.
'ಮೈತ್ರಿ ಮಾಡಿಕೊಳ್ಳದಿದ್ದರೂ ರಾಮನಗರದಲ್ಲಿ ಜೆಡಿಎಸ್ಗೆ ಗೆಲುವು'
ಕೇಂದ್ರ ಸಚಿವ ಡಿವಿ ಸದಾನಂದಗೌಡರು ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಆದರೂ ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ, ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ಪ್ರಚಾರದಲ್ಲಿ ತೊಡಗಿದೆ ಆದರೆ ಎದುರಾಳಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಮುಂದೆ ನಿಲ್ಲಲು ಬಿಜೆಪಿ ಹಿಂದೇಟು ಹಾಕುತ್ತಿರವುದಕ್ಕೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.