ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಭಾರಿ ಪೆಟ್ಟು ಬೀಳುವ ಸಂಭವ
ರಾಮನಗರ, ನವೆಂಬರ್ 03: ಉಪಚುನಾವಣೆ ಶುರುವಾಗಿದ್ದೆ ರಾಮನಗರ ಬಿಜೆಪಿಗೆ ಶುಕ್ರದೆಸೆಯೇ ಕೈಕೊಟ್ಟಂತಿದೆ. ಸತತ ಪೆಟ್ಟಿನ ಪೆಟ್ಟು ಬೀಳುತ್ತಲೇ ಇದೆ.
ಮೊದಲಿಗೆ ಹೊರಗಿನಿಂದ ಬಂದ ಅಭ್ಯರ್ಥಿಗೆ ವಿಧಾನಸಭೆ ಉಪಚುನಾವಣೆ ಟಿಕೆಟ್ ನೀಡಲಾಯಿತು. ಆ ನಂತರ ಮತದಾನ ಎರಡು ದಿನ ಇದ್ದಂತೆ ಆ ಅಭ್ಯರ್ಥಿ ಕಾಂಗ್ರೆಸ್ಗೆ ಕಾಲ್ಕಿತ್ತು ಬಿಜೆಪಿ ಸ್ಪರ್ಧೆಯಿಂದಲೇ ಹೊರಗುಳಿಯುವಂತೆ ಮಾಡಿದರು. ಈಗ ಮತ್ತೊಂದು ಭಾರಿ ಪೆಟ್ಟು ಬೀಳುವ ಸಂಭವ ಇದೆ.
ರಾಮನಗರ ಜಿಲ್ಲೆಯಲ್ಲಿ ಬಹುಕಾಲದಿಂದ ಬಿಜೆಪಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದ ನಿಷ್ಠಾವಂತ ಕಾರ್ಯಕರ್ತ, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ರಾಮನಗರದ ಬಿಜೆಪಿಯಲ್ಲಿ ಒಂದೇ ಒಂದು ತಿಂಗಳಲ್ಲಿ ಏನೇನಾಯ್ತು ನೋಡಿ...
ಹೌದು, ರಾಮನಗರದಲ್ಲಿ ಕೆಲವು ದಿನಗಳಿಂದ ನಡೆದ ಬೆಳವಣಿಗೆಯಿಂದ ಮನನೊಂದಿರುವ ರುದ್ರೇಶ್ ಅವರು, ಉಪಚುನಾವಣೆ ಮುಗಿದ ನಂತರ ಅಥವಾ ನಾಳೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಅವರ ಆಪ್ತವಲಯ ಹೇಳುತ್ತಿದೆ.
ಏಕೆ ರಾಜೀನಾಮೆ?
ಉಪಚುನಾವಣೆಯಿಂದ ಬಿಜೆಪಿ ನಾಯಕರು ರಾಮನಗರದ ಬಗ್ಗೆ ನಡೆದುಕೊಂಡ ರೀತಿಗೆ ರುದ್ರೇಶ್ ಅವರು ಬೇಸರಗೊಂಡಿದ್ದಾರೆ. ಚಂದ್ರಶೇಖರ್ ಅವರು ಕೈಕೊಟ್ಟಾಗಲೂ ಸಹ ಯಾವೊಬ್ಬ ಬಿಜೆಪಿ ಮುಖಂಡರೂ ಸಹ ರಾಮನಗರದತ್ತ ತಲೆ ಹಾಕಿಲ್ಲ, ಇಲ್ಲಿನ ಕಾರ್ಯಕರ್ತರ ಅಳಲು ಕೇಳಿಲ್ಲ ನಮ್ಮನ್ನು ಒಂಟಿ ಮಾಡಲಾಗಿದೆ ಎಂಬುದು ಅವರ ನೋವು.
ರಾಮನಗರದಲ್ಲಿ ರಾಜ್ಯ ಬಿಜೆಪಿ ಮುಖಂಡರೇ 'ಬಿಜೆಪಿಯನ್ನು ಬಕ್ರಾ' ಮಾಡಿದ್ರಾ?
ಚಂದ್ರಶೇಖರ್ ಮನವೊಲಿಸುವ ಯತ್ನ ಮಾಡಿಲ್ಲ
ಚಂದ್ರಶೇಖರ್ ಪಕ್ಷ ಬಿಡುವ ಮುನ್ಸೂಚನೆ ಕೆಲವರಿಗೆ ಇತ್ತು ಆದರೂ ಸಹ ಸ್ಥಳೀಯ ಬಿಜೆಪಿ ನಾಯಕರಾದ ಯೋಗೀಶ್ವರ್ ಆಗಲಿ ಉಸ್ತುವಾರಿ ವಹಿಸಿದ್ದ ಅಶೋಕ್ ಆಗಲಿ ಅವರ ಮನವೊಲಿಸುವ ಕಾರ್ಯ ಮಾಡಿಲ್ಲ ಎಂದು ರುದ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?
ಕಾರ್ಯಕರ್ತರ ಅಳಲು ಕೇಳಲು ಯಾರೂ ಇಲ್ಲ
ರಾಮನಗರ ಬಿಜೆಪಿ ಕಾರ್ಯಕರ್ತರ ಅಳಲು ಕೇಳಲು ಯಾವೊಬ್ಬ ನಾಯಕರೂ ಇತ್ತ ಬರಲಿಲ್ಲ. ಪ್ರಚಾರ ಸಮಯದಲ್ಲೂ ಕೈಕೊಟ್ಟರು. ಅಭ್ಯರ್ಥಿ ಬಿಟ್ಟು ಹೋದಾಗ ಜಿಲ್ಲೆಯ ಕಾರ್ಯಕರ್ತರನ್ನು ಮುನ್ನಡೆಸಲು ಸಹ ಯಾವೊಬ್ಬ ಮುಖಮಡರೂ ಇತ್ತ ಕಡೆ ತಲೆ ಹಾಕಲಿಲ್ಲ, ಕನಿಷ್ಠ ಕರೆ ಮಾಡಿ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ ಎಂದು ರುದ್ರೇಶ್ ಅವರು ಆಕ್ರೋಶ ಭರಿತರಾಗಿದ್ದಾರೆ ಎನ್ನಲಾಗಿದೆ.
ನಾಳೆ ಯಡಿಯೂರಪ್ಪ ಭೇಟಿ
ನಾಳೆ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಆಗಲಿರುವ ರುದ್ರೇಶ್ ಅವರು ಅವರಿಗೆ ಜಿಲ್ಲೆಯಲ್ಲಿನ ಪಕ್ಷದ ಬೆಳವಣಿಗೆಗಳ ಬಗ್ಗೆ ತಿಳಿಸಿ ಅಲ್ಲಿಯೇ ರಾಜೀನಾಮೆ ಪತ್ರ ನೀಡಲಿದ್ದಾರೆ ಎನ್ನಲಾಗಿದೆ.
ರುದ್ರೇಶ್ ಆಕಾಂಕ್ಷಿಯಾಗಿದ್ದರು
ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ರುದ್ರೇಶ್ ಅವರು ಉಪಚುನಾವಣೆ ಟಿಕೆಟ್ನ ಆಕಾಂಕ್ಷಿಯಾಗಿದ್ದರು ಆದರೆ ಕಾಂಗ್ರೆಸ್ನಿಂದ ಪಕ್ಷಕ್ಕೆ ಬಂದ ಎಲ್.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ ರುದ್ರೇಶ್ ಅವರು ಅಸಮಾಧಾನ ವ್ಯಕ್ತಪಡಿಸದೆ ಪಕ್ಷಕ್ಕಾಗಿ ದುಡಿದಿದ್ದರು ಆದರೆ ಚುನಾವಣೆ ಎರಡು ದಿನ ಇದ್ದಾಗ ಅವರು ಕಾಂಗ್ರೆಸ್ ತೆಕ್ಕೆಗೆ ಸೇರಿಕೊಂಡರು.