ಡಿಕೆಶಿಗಾಗಿ ಅಲ್ಲ, ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ; ಮೃತನ ಕುಟುಂಬಸ್ಥರ ಸ್ಪಷ್ಟನೆ
ರಾಮನಗರ, ಅಕ್ಟೋಬರ್ 11: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲು ಪಾಲಾದ್ದರಿಂದ ಮನನೊಂದು ಡಿಕೆಶಿ ಅಭಿಮಾನಿ ಮಹದೇವ್ ಆತ್ಮಹತ್ಯೆಗೆ ಶರಣಾದರು ಎನ್ನಲಾದ ಪ್ರಕರಣವನ್ನು ಸುಳ್ಳು ಎಂದು ಮಹದೇವ್ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.
ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ನಿವಾಸಿ ಮಹದೇವ (43) ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕನಾಗಿದ್ದು ಗ್ರಾಮದಲ್ಲಿ ತಿಕ್ಕಲು ಮಹದೇವ ಎಂದೇ ಪರಿಚಿತ. ಈತ ಬುಧವಾರ ಸಂಜೆ ವೇಳೆ ಮನೆಯವರೊಂದಿಗೆ ಜಗಳವಾಡಿಕೊಂಡು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡ ಮಹದೇವನನ್ನು ಸಂಬಂಧಿಕರು ಪಟ್ಟಣದ ಕನಕ ಕ್ಲಿನಿಕ್ ಸೇರಿಸಲು ಹೋಗುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೇ ಕೆಲವರು ಡಿಕೆಶಿ ಪ್ರಕರಣವನ್ನು ಜೀವಂತವಾಗಿಡಲು ಬಳಸಿಕೊಂಡಿದ್ದಾರೆ ಎಂದು ಮೃತ ಮಹದೇವ ಪರಿಚಿತರು ಆರೋಪಿಸಿದ್ದಾರೆ.
ಅಧಿವೇಶನದಲ್ಲಿ ಡಿಕೆಶಿ ಇಲ್ಲ, ಆದರೆ ಅವರು ನುಡಿದಿದ್ದ ಯಾವ ಭವಿಷ್ಯವೂ ಸುಳ್ಳಾಗಿಲ್ಲ!
ಕುಡಿತದ ಚಟವಿದ್ದ ಮಹದೇವ್ ಕುಡಿದ ಅಮಲಿನಲ್ಲಿ ಡಿಕೆಶಿ ಬಂದನದ ಬಗ್ಗೆ ಮಾತನಾಡಿರಬಹುದು ಆದರೆ ಮಹದೇವನ ಆತ್ಮಹತ್ಯೆಗೆ ಡಿಕೆಶಿ ಬಂಧನ ಪ್ರಕರಣ ಕಾರಣವಲ್ಲ, ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಡಿಕೆಶಿ ಬಂಧನದ ನಂತರ ಕನಕಪುರ ತಾಲ್ಲೂಕಿನಾದ್ಯಂತ ಡಿಕೆಶಿ ಬೆಂಬಲಿಗರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ನಗರದ ಚನ್ನಬಸಪ್ಪ ಸರ್ಕಲ್ ನಲ್ಲಿ ಟೆಂಟ್ ಹಾಕಿ ಸುಮಾರು 20 ದಿನಗಳ ಕಾಲ ಡಿಕೆಶಿ ಖಂಡಿಸಿ ನಿರಂತರ ಪ್ರತಿಭಟನೆ ಮುಂದುವರಿಸಿ ಡಿಕೆಶಿ ಬಿಡುಗಡೆಯಾಗುವವರೆಗೆ ನಿರಂತರ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದರು.
ಡಿ.ಕೆ.ಶಿವಕುಮಾರ ನ್ಯಾಯಾಂಗ ಬಂದನದ ಅವಧಿ ವಿಸ್ತಾರಗೊಂಡಂತೆ ತಾಲ್ಲೂಕಿನ ಜನತೆ ಡಿಕೆಶಿ ಪ್ರಕರಣ ಬಿಸಿ ತಣ್ಣಗಾಗಿತ್ತು. ಇದನ್ನು ಮನಗಂಡ ಕೆಲ ಕಿಡಿಗೇಡಿಗಳು ಮಹದೇವ ಆತ್ಮಹತ್ಯೆ ಪ್ರಕರಣಕ್ಕೆ ಡಿಕೆಶಿ ಅಭಿಮಾನಿಯ ಆತ್ಮಹತ್ಯೆ ಎಂಬ ಬಣ್ಣ ಕಟ್ಟಿ ಡಿಕೆಶಿ ಪ್ರಕರಣವನ್ನು ಜೀವಂತವಿಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ರಾಮನಗರ ರಾಜಕೀಯದಲ್ಲಿ ದಾಳ ಉರುಳಿಸಿದ ಸಿದ್ದರಾಮಯ್ಯ!
ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಮೃತನಾದ ಮಹದೇವನ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೆರವೇರಿಸಿದ್ದಾಗಿ ಮೃತನ ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಕೋಡಿಹಳ್ಳಿ ಪೋಲಿಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.