ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಿಸಿಎಂ ಅಶ್ವತ್ಥನಾರಾಯಣ
ರಾಮನಗರ, ಮೇ 29: ರಾಮನಗರದಲ್ಲಿ ಈ ವರ್ಷದ ಕೊನೆಯೊಳಗೆ 'ಹೆಲ್ತ್ ಸಿಟಿ' ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ನಂತರ ಆರೋಗ್ಯ ಸೇವೆಯಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಮನಗರ ಜಿಲ್ಲಾ ಆಸ್ಪತೆಗೆ ಶುಕ್ರವಾರ ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ದಾದಿಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದ ಬಳಿಕ ಅವರು ಮಾತನಾಡಿದರು. "ರಾಮನಗರವನ್ನು ಹೆಲ್ತ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಕಾರ್ಯ ಈ ವರ್ಷದ ಕೊನೆಯೊಳಗೆ ಆರಂಭವಾಗಲಿದ್ದು, ಅತ್ಯುತ್ತಮ ಆರೋಗ್ಯ ಸೇವೆ ಇಲ್ಲಿ ಲಭ್ಯವಾಗಲಿದೆ. ಈ ಮೂಲಕ ಜಿಲ್ಲೆ ರಾಜ್ಯಕ್ಕೆ ಮಾದರಿ ಆಗಲಿದೆ. ಜತೆಗೆ, ಜೂನ್ ವೇಳೆಗೆ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಆದಷ್ಟು ಬೇಗ ಆರೋಗ್ಯ ಸೇವೆ ಆರಂಭಿಸಲಾಗುವುದು,"ಎಂದು ಮಾಹಿತಿ ನೀಡಿದರು.
"ಆರೋಗ್ಯ ಮಾಹಿತಿ ಡಿಜಿಟಲ್ ದಾಖಲೀಕರಣವಾಗಲಿರುವ ಮೊದಲ ಜಿಲ್ಲೆ"
"ಇಡೀ ಜಿಲ್ಲೆಯ ಜನರ ಆರೋಗ್ಯ ಸಮೀಕ್ಷೆ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ವೇದಿಕೆಯಲ್ಲಿ ದಾಖಲಿಸಿರುವ ದೇಶದ ಮೊದಲ ಜಿಲ್ಲೆ ನಮ್ಮ ರಾಮನಗರವಾಗಿದ್ದು, ಕೋವಿಡ್ 19 ವಾರ್ ರೂಂನಲ್ಲಿ ಈ ಕುರಿತಂತೆ ರಿಯಲ್ ಟೈಮ್ ಮಾಹಿತಿ ಲಭ್ಯವಿರುತ್ತದೆ. ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಇಡೀ ಕುಟುಂಬ ಸದಸ್ಯರ ಆರೋಗ್ಯ ಮಾಹಿತಿ ಕಲೆಹಾಕಿದ್ದಾರೆ. ಈಗ ಇದು ಇತರ ಜಿಲ್ಲೆಗಳಿಗೂ ಮಾದರಿ ಆಗಿದೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಒಂದು ಸೀಮಿತ ವರ್ಗದವರ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ"ಎಂದರು.
ಉಪನ್ಯಾಸಕರ ವರ್ಗಾವಣೆಗೆ ಶೀಘ್ರ ಹೊಸ ನಿಯಮ ಜಾರಿ: ಅಶ್ವತ್ಥನಾರಾಯಣ
ಆಸ್ಪತ್ರೆ ಮೂಲಸೌಕರ್ಯಗಳ ಮೇಲೆ ನಿಗಾ
"ಆಸ್ಪತ್ರೆಯಲ್ಲಿರುವ ಆಕ್ಸಿಜನ್ ವ್ಯವಸ್ಥೆ, ಒಟ್ಟು ಹಾಸಿಗೆ ಸಾಮರ್ಥ್ಯ ಇನ್ನಿತರ ಮೂಲ ಸೌಕರ್ಯ, ವೈದ್ಯಕೀಯ ಉಪಕರಣಗಳ ದಾಸ್ತಾನು, ಔಷಧ ಸಂಗ್ರಹ, ವೈದ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಸಂಖ್ಯೆ, ಚಿಕಿತ್ಸೆ ಪಡೆದವರ ಮಾಹಿತಿ ವಾರ್ ರೂಂನ ಡ್ಯಾಶ್ ಬೋರ್ಡ್ನಲ್ಲಿ ಲಭ್ಯ. ಜತೆಗೆ, ಜಿಪಿಎಸ್ ತಂತ್ರಜ್ಞಾನದ ನೆರವಿನೊಂದೊಗೆ ಆಂಬುಲೆನ್ಸ್ ಇರುವ ಸ್ಥಳವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ವಾರ್ ರೂಂನಿಂದಲೇ ತಿಳಿದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ವ್ಯವಸ್ಥೆ ಇಲ್ಲಿದೆ. ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಯನ್ನು ಹಲವಾರು ಸಂಸ್ಥೆಗಳು ಸಮರ್ಥವಾಗಿ ನಿಭಾಯಿಸಿದ್ದು, ಜಿಲ್ಲೆಯಲ್ಲಿ ಈ ಎಲ್ಲ ಸೌಕರ್ಯ ಕಲ್ಪಿಸಲು ಸುಮಾರು 2 ಕೋಟಿ ರೂ. ನೆರವು ನೀಡಿವೆ. ಮುಂದೆಯೂ ಅಗತ್ಯ ಸಹಕಾರ ನೀಡುವ ಭರವಸೆ ನೀಡಿವೆ,"ಎಂದು ತಿಳಿಸಿದರು.
ವೈದ್ಯಕೀಯ ಸಿಬ್ಬಂದಿಗೆ ಕಾಣಿಕೆ
ಕೋವಿಡ್ ನಿಯಂತ್ರಣಕ್ಕೆ ಸೇವೆ ಸಲ್ಲಿಸಿರುವ ಜಿಲ್ಲೆಯ 212 ದಾದಿಯರಿಗೆ ಇಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ತಲಾ 1500 ರೂ.ಗಳ ಕಿರು ಕಾಣಿಕೆ ನೀಡಿದರು. ಜಿಲ್ಲೆಯ ಬಿಜೆಪಿ ಅಧ್ಯಕ್ಷ ರುದ್ರೇಶ್ ಅವರು ಕಿರುಕಾಣಿಕೆ ಸಲ್ಲಿಸುವ ಕಾರ್ಯಕ್ರಮದ ವ್ಯವಸ್ಥೆ ಮಾಡಿರುವುದು ಗೌರವದ ಕೆಲಸ ಎಂದರು.
ಹುವೈನಿಂದ ರಾಜ್ಯದ 2000 ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ತರಬೇತಿ
ರಾಮನಗರದ 60 ಗ್ರಾಮ ಪಂಚಾಯ್ತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ರಾಮನಗರದ 60 ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು. ಜಿಲ್ಲೆಯ 60 ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ ತ್ರಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. "ರಾಮನಗರವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಸಾಕಷ್ಟು ಕೆಲಸ ಮಾಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸೋಣ. ಜಿಲ್ಲೆಯ 2243 ಕೆರೆಗಳ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಬಹುದಿನಗಳಿಂದ ಬಾಕಿ ಉಳಿದಿರುವ ಹೆಲ್ತ್ ಸಿಟಿ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ. ಮಾವು ಸಂಸ್ಕರಣಾ ಕೇಂದ್ರ, ರೇಷ್ಮೆ ಮಾರುಕಟ್ಟೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಕುಡಿಯುವ ನೀರಿನ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಈ ಎಲ್ಲ ಕೆಲಸಗಳ ವೇಗ ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗುವುದು"ಎಂದು ತಿಳಿಸಿದರು.