ಮೂವರು ಜಿಲ್ಲಾಧಿಕಾರಿಗಳು ಬಂದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ; ದಯಾಮರಣಕ್ಕೆ ಮನವಿ ಸಲ್ಲಿಸಿದ ರೈತ
ರಾಮನಗರ, ನವೆಂಬರ್ 26: ಸಿಎಂ ಪತ್ರಕ್ಕೂ ಕ್ಯಾರೇ ಎನ್ನದ ಅಧಿಕಾರಿ ವರ್ಗ... ಐದು ವರ್ಷದ ಅವಧಿಯಲ್ಲಿ ಮೂವರು ಜಿಲ್ಲಾಧಿಕಾರಿಗಳು... ಐದು ಮಂದಿ ಅಸಿಸ್ಟೆಂಟ್ ಕಮಿಷನರ್, ಆರು ಮಂದಿ ತಾಲ್ಲೂಕು ದಂಡಾಧಿಕಾರಿಗಳು... ಆದರೂ ಬಗೆಹರಿಯದ ಸಮಸ್ಯೆ... ಇವೆಲ್ಲವನ್ನೂ ನೋಡಿ ಮನನೊಂದ ರೈತರೊಬ್ಬರು ರಾಮನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಾಲೂಕಿನ ಜೋಗಿದೊಡ್ಡಿ ಗ್ರಾಮದ ರೈತ ಜಗದೀಶ್ ಹಾಗೂ ಪತ್ನಿ ತೇಜೋಮಣಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಕೋಳಿ ಫಾರಂ ನಡೆಸಲು ತನ್ನ ಜಮೀನಿಗೆ ರಸ್ತೆ ಮಾಡಿಸಿ, ಇಲ್ಲ ನನ್ನ ಕುಟುಂಬಕ್ಕೆ ದಯಾಮರಣ ಕರುಣಿಸಿ ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದ ಪಂಜಾಬ್ನ ಯುವತಿಯರು
ಇವರಿಗೆ ಎರಡು ಎಕರೆ ಕೃಷಿ ಭೂಮಿ ಇದೆ. ಆ ಭೂಮಿಯಲ್ಲಿ ದುಡಿದು ತಾವೂ ಎಲ್ಲರಂತೆ ಚೆನ್ನಾಗಿ ಜೀವನ ಸಾಗಿಸಬೇಕೆಂದುಕೊಂಡಿದ್ದರು. ರಾಮನಗರ ಶಾಖೆಯ ಪಿಎಲ್ ಡಿ ಬ್ಯಾಂಕ್ನಿಂದ 2014ರಲ್ಲಿ ಕೋಳಿ ಫಾರಂ ಮಾಡುವುದಕ್ಕಾಗಿ 9.50 ಲಕ್ಷ ರೂಪಾಯಿ ಸಾಲ ಕೂಡ ಪಡೆದಿದ್ದರು. ಆದರೆ ಕೋಳಿ ಫಾರಂ ಕಟ್ಟಿಸಿ ಇನ್ನೇನು ವ್ಯವಹಾರ ಶುರು ಮಾಡಬೇಕಿತ್ತು, ಅಷ್ಟರಲ್ಲಿ ಇವರ ಜಮೀನಿನ ಅಕ್ಕಪಕ್ಕದವರು ತಗಾದೆ ತೆಗೆದು ಇವರ ಜಮೀನಿಗಿದ್ದ ರಸ್ತೆಯನ್ನೇ ಬಂದ್ ಮಾಡಿದರು. ರಸ್ತೆ ಬಂದ್ ಮಾಡಿದ ಕಾರಣ ಕೋಳಿ ಫಾರಂ ಬ್ಯುಸಿನೆಸ್ ಅರ್ಧಕ್ಕೆ ನಿಂತಿತು. ನಂತರ ಜಗದೀಶ್ ತಮ್ಮ ಜಮೀನಿಗೆ ರಸ್ತೆ ಮಾಡಿಕೊಡಿ ಎಂದು ಕಳೆದ ಐದು ವರ್ಷಗಳಿಂದ ಅಂದಿನಿಂದ ಇಂದಿನವರೆಗೆ ತಾಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಪತ್ರ ಬರೆದಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.
ಸಿಎಂ ಪತ್ರಕ್ಕೂ ಕ್ಯಾರೇ ಎನ್ನದ ಅಧಿಕಾರಿಗಳು: ಈ ಹಿಂದೆ ಕ್ಷೇತ್ರದ ಶಾಸಕರು ಹಾಗೂ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಇವರು ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಂಡು ಪತ್ರ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. "ಆದರೆ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ, ಪ್ರತಿ ದಿನ ಕಚೇರಿಗೆ ತಿರುಗಿದರೂ ಪ್ರಯೋಜನವಾಗಿಲ್ಲವೆಂದು" ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಗದೀಶ್.
ಸಾಲದ ಶೂಲದಲ್ಲಿ ರೈತ: ಕೋಳಿ ಫಾರಂಗಾಗಿ ಪಡೆದಿದ್ದ 9.5 ಲಕ್ಷದ ಜೊತೆಗೆ ಈಗ 4 ಲಕ್ಷ ಬಡ್ಡಿ ಕೂಡ ಹೆಚ್ಚಳವಾಗಿದ್ದು, ಯಾವುದೇ ಸಂಪಾದನೆಯಿಲ್ಲದೆ ಸಾಲ ತೀರಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಜಗದೀಶ್. ಬ್ಯಾಂಕಿನ ಸಾಲದ ನೋಟೀಸ್ ಪದೇ ಪದೇ ಬರುತ್ತಿರುವುದು ಇವರ ಆತಂಕ ಹೆಚ್ಚಿಸಿದೆ. "ರೈತರ ಸಾಲ ಮನ್ನಾ ಯೋಜನೆಯಲ್ಲೂ ನನ್ನ ಸಾಲ ಮನ್ನಾ ಆಗಿಲ್ಲ. ಬದುಕು ನಡೆಸುವುದು ಹೇಗೆ?, ನಮ್ಮ ಸಮಸ್ಯೆ ಪರಿಹರಿಸಿ ಇಲ್ಲಾ ನಮಗೆ ದಯಾಮರಣ ಕರುಣಿಸಿ ಎಂದು ಬೇಡಿಕೊಳ್ಳುತ್ತಿದ್ದೇವೆ" ಎನ್ನುತ್ತಿದ್ದಾರೆ ಈ ರೈತ ದಂಪತಿ.