ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ
Recommended Video
ರಾಮನಗರ, ನವೆಂಬರ್ 01: ಉಪಚುನಾವಣೆಗೆ ಎರಡು ದಿನ ಬಾಕಿ ಇರುವಾಗ ರಾಮನಗರ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದ ಅವರ ಈ ನಡೆಗೆ ಅವರು ಹಲವು ಕಾರಣಗಳನ್ನು ನೀಡಿದ್ದಾರೆ.
ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ ಕಾಂಗ್ರೆಸ್ ನಡೆಗೆ ಬೇಸತ್ತು ಎಲ್ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಎಲ್ ಚಂದ್ರಶೇಖರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಬಿಜೆಪಿ ಅವರಿಗೆ ರಾಮನಗರ ಟಿಕೆಟ್ ನೀಡಿತ್ತು.
ಆದರೆ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ನಾಯಕರ ಬಗೆಗೆ ಮುನಿಸಿಕೊಂಡು ಇದೀಗ ಬಿಜೆಪಿಗೆ ರಾಜೀನಾಮೆ ನೀಡಿ ಚಂದ್ರಶೇಖರ್ ಅವರು ಕಾಂಗ್ರೆಸ್ಸಿಗೆ ಸೇರಿದ್ದಾರೆ. ತಮ್ಮ ಈ ಅಚ್ಚರಿಯ ನಡೆಗೆ ಅವರು ನೀಡಿದ ಕಾರಣಗಳು ಇಂತಿವೆ...
ಯಡಿಯೂರಪ್ಪ ಅವರಿಗೆ ಬೇರೆ ಅಭ್ಯರ್ಥಿಗಳ ಬಗ್ಗೆ ಕಾಳಜಿ ಇಲ್ಲ!
"ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಬೇರೆ ಅಭ್ಯರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಅವರು ತಮ್ಮ ಪುತ್ರ ಸ್ಪರ್ಧಿಸಿರುವ ಶಶಿವಮೊಗ್ಗ ಕ್ಷೇತ್ರದ ಬಗ್ಗೆ ಮಾತ್ರ ಗಮನಹರಿಸಿದ್ದಾರೆ. ಇದರಿಂದಾಗಿ ರಾಮನಗರದಲ್ಲಿ ನನ್ನ ಪರ ಪ್ರಚಾರಕ್ಕೆ ಯಾವುದೇ ಬಿಜೆಪಿ ನಾಯಕರೂ ಬರುತ್ತಿಲ್ಲ. ಇದು ನನಗೆ ತೀವ್ರ ಅಸಮಾಧಾನವನ್ನುಂಟು ಮಾಡಿದೆ"- ಎಲ್ ಚಂದ್ರಶೇಖರ್
ಸುಳ್ಳು ಭರವಸೆ ನೀಡಿದ್ದ ಯೋಗೀಶ್ವರ್
"ಬಿಜೆಪಿ ಮುಖಂಡ ಯೋಗೀಶ್ವರ್ ಅವರೇ ನನ್ನನ್ನು ಬಿಜೆಪಿಗೆ ಕರೆತಂದವರು. ರಾಮನಗರದ ಟಿಕೆಟ್ ನೀಡುವುದಾಗ ಭರವಸೆ ನೀದಿದ್ದರು. ಅಂತೆಯೇ ಕೊಡಿಸಿದರು ಕೂಡ. ಆದರೆ ಚುನಾವಣೆಯ ಖರ್ಚು ವೆಚ್ಚವನ್ನೂ ತಾವೇ ವಹಿಸಿಕೊಳ್ಳುವುದಾಗಿ ಹೇಳಿದ್ದರು. ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸುವುದಾಗಿಯೂ ಹೇಳಿದ್ದರು. ಕೆಲವೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದಿದ್ದರು. ಹಲವು ಶಾಸಕರನ್ನು ಬುಕ್ ಮಾಡಿದ್ದೇನೆ, ಸರ್ಕಾರ ಬೀಳುತ್ತೆ ಎನ್ನುತ್ತಿದ್ದರು. ಇಷ್ಟೆಲ್ಲ ಆಗಿ, ನನ್ನ ಪರ ಪ್ರಚಾರಕ್ಕೆ ಅವರು ರಾಮನಗರಕ್ಕೆ ಎಷ್ಟು ದಿನ ಬಂದಿದ್ದಾರೆ? ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ!"- ಎಲ್ ಚಂದ್ರಶೇಖರ್
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?
ಕ್ಷೇತ್ರದ ಅಭಿವೃದ್ಧಿ ಮುಖ್ಯ
ನಾನು ಮೂಲತಃ ಕಾಂಗ್ರೆಸ್ಸಿನಲ್ಲಿದ್ದೆ. ನಮ್ಮ ತಂದೆ ಸಿ.ಎಂ.ಲಿಂಗಪ್ಪ ಸಹ ಕಾಂಗ್ರೆಸ್ ಎಂಎಲ್ ಸಿ. ಆದರೆ ಬದಲಾದ ಸನ್ನಿವೇಶದಲ್ಲಿ ನಾನು ಬಿಜೆಪಿ ಸೇರಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದೆ. ಮುಖ್ಯಮಂತ್ರಿಯವರು ಪ್ರತಿನಿಧಿಸಿದ್ದ ಕ್ಷೇತ್ರ ರಾಮನಗರ. ಈ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಅದಕ್ಕೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಎಲ್ಲರ ಸಹಕಾರ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದಲೂ ನಾನು ಈ ನಿರ್ಧಾರ ಕೈಗೊಂಡಿದ್ದೇನೆ -ಎಲ್.ಚಂದ್ರಶೇಖರ್
ಪ್ರಚಾರಕ್ಕೇ ಬಾರದ ನಾಯಕರು
ನನ್ನನ್ನು ರಾಮನಗರ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ನಿಜ. ಆದರೆ ಅಂದಿನಿಂದ ಇಂದಿನವರೆಗೆ ಎಷ್ಟು ಬಿಜೆಪಿ ನಾಯಕರು ಕ್ಷೇತ್ರದತ್ತ ಸುಳಿದಿದ್ದಾರೆ? ಪ್ರಚಾರ ಮಾಡುವಾಗ ನನ್ನೊಂದಿಗೆ ಎಷ್ಟು ಜನ ಸಾಥ್ ನೀಡಿದ್ದಾರೆ? ನನ್ನನ್ನು ಈ ಪರಿ ಕಡೆಗಣಿಸುತ್ತಿರುವುದು ನನಗೆ ತೀವ್ರ ಅಸಮಾಧಾನವನ್ನುಂಟು ಮಾಡಿದೆ- ಎಲ್. ಚಂದ್ರಶೇಖರ್
ರಾಮನಗರ ಉಪ ಚುನಾವಣೆ : ಜೆಡಿಎಸ್, ಬಿಜೆಪಿ ಬಲಾಬಲವೇನು?
ನ.3 ರಂದು ಉಪಚುನಾವಣೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ್ದರು. ನಂತರ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದರಿಂದ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ನ.3 ರಂದು ಚುನಾವಣೆ ನಡೆಯಲಿದ್ದು, ನ.6 ರಂದು ಫಲಿತಾಂಶ ಬಿಡುಗಡೆಯಾಗಲಿದೆ.