ಟೊಯೊಟಾ ಸಮಸ್ಯೆ ಇತ್ಯರ್ಥಕ್ಕೆ 8 ದಿನದ ಗಡುವು ನೀಡಿದ ಪ್ರತಿಭಟನಾಕಾರರು
ರಾಮನಗರ, ಜನವರಿ 28: ವಿಶ್ವದ ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರು ಕಳೆದ 80 ದಿನಗಳಿಂದ ನಿರಂತರವಾಗಿ ಕಂಪನಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ಆದರೆ ಟೊಯೊಟಾ ಕಾರ್ಮಿಕರ ಪ್ರತಿಭಟನೆಗೆ ಆಡಳಿತ ಮಂಡಳಿ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಆದ್ದರಿಂದ ಟೊಯೊಟಾ ಕಂಪನಿ ವಿರುದ್ಧ ಸಿಡಿದೆದ್ದ ಕಾರ್ಮಿಕರು ಗುರುವಾರ ಬೃಹತ್ ಪಾದಯಾತ್ರೆ ನಡೆಸಿದರು.
ಮಾಜಿ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಟೊಯೊಟಾ ಕಾರ್ಮಿಕರ ಪಾದಯಾತ್ರೆ
ಕಾರ್ಮಿಕರ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು, ಕನ್ನಡಪರ ಸಂಘಟನೆಗಳು ಸಾಥ್ ನೀಡಿದರು. ಸುಮಾರು 6 ಕಿ.ಮೀ ವರೆಗೂ ಪಾದಯಾತ್ರೆ ನಡೆಸಿ, ಟೊಯೊಟಾ ಆಡಳಿತ ಮಂಡಳಿ ವಿರುದ್ಧ ಗುಡುಗಿದರು.
ಟೊಯೊಟಾ ಆಡಳಿತ ಮಂಡಳಿ ಈಗಾಗಲೇ ಅಸಿಶ್ತಿನ ಹೆಸರಿನಲ್ಲಿ 74 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದೆ. ಹಾಗಾಗಿ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ. ಇದರ ಅಂಗವಾಗಿ ಇವತ್ತು ಟೊಯೊಟಾ ಕಾರ್ಮಿಕರು, ಕಾಂಗ್ರೆಸ್ ನಾಯಕರಾದ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ರಾಜು ಹಾಗೂ ಕನ್ನಡಪರ ಹಾಗೂ ರೈತ ಮುಖಂಡರು ಸೇರಿದಂತೆ ಕಾರ್ಮಿಕರ ಕುಟುಂಬದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ರಾಜ್ಯ ಸರಕಾರ ಹಾಗೂ ಟೊಯೊಟಾ ಆಡಳಿತ ಮಂಡಳಿ ಜೊತೆಗೆ ಈಗಾಗಲೇ ನಾನು ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ನಡೆಯುತ್ತದೆ, ವಿಧಾನಸಭೆ ಕಲಾಪದಲ್ಲಿ ಕೂಡ ಈ ಬಗ್ಗೆ ನಮ್ಮ ನಾಯಕರು ಮಾತನಾಡುತ್ತಾರೆ ಎಂದು ತಿಳಿಸಿದರು.
ಪಾದಯಾತ್ರೆ ನೇತೃತ್ವವನ್ನು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವಹಿಸಿದ್ದರು. ಪಾದಯಾತ್ರೆಯಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು, ಕೈ ಕಾರ್ಯಕರ್ತರು ಭಾಗವಹಿಸಿದರು. ಈ ವೇಳೆ ಬಾಲಕೃಷ್ಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರ ಪರ ಮಾತನಾಡುವುದಲ್ಲಾ, ಸ್ಥಳಕ್ಕೆ ಬಂದು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಬೇಕು ಅಂತಾ ಕುಟುಕಿದರು.
ಟೊಯೊಟಾ ಕಾರ್ಖಾನೆಗೆ ಕೈ ನಾಯಕರು 100 ದಿನ ಪೂರೈಸುವಷ್ಟರಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಎಚ್ವರಿಕೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಯಾವ ಸ್ವಾರೂಪ ಪಡೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.