ರಾಮನಗರದಲ್ಲಿ ಹೆದ್ದಾರಿ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ
ರಾಮನಗರ, ಅಕ್ಟೋಬರ್ 26: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ರಾಮನಗರದ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಗುಂಡಿಗಳನ್ನ ತಪ್ಪಿಸಲು ಹೋಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ರಸ್ತೆ ದುರಸ್ಥಿ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ನಿದ್ದೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮುಂದಿನ ದಿನಗಳಲ್ಲಿ ರಸ್ತೆ ದುರಸ್ಥಿ ಮಾಡಲು ಇಲಾಖೆ ಮುಂದಾಗದಿದ್ದರೆ ಸಂಘಟನೆ ವತಿಯಿಂದ ರಸ್ತೆ ತಡೆ ಚಳುವಳಿ ಮಾಡುವುದಾಗಿ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಧರಣಿ ನಿರತರು ಎಚ್ಚರಿಕೆ ನೀಡಿದರು.
ರಾಜ್ಯದ ಬಹುತೇಕ ರಸ್ತೆ ಕಾಮಗಾರಿಗಳು ಕಳಪೆ ಗುಣಮಟ್ಟದಾಗಿದೆ. ಅದರಲ್ಲೂ ಭ್ರಷ್ಟಚಾರ ತುಂಬಿ ತುಳುಕುತ್ತಿರುವ ಇಲಾಖೆ ಎಂದರೆ ಲೋಕೋಪಯೋಗಿ ಇಲಾಖೆ. ಇನ್ನಾದರು ಸರಕಾರ ಎಚ್ಚೆತ್ತು ಗುಂಡಿ ಮುಚ್ಚುವ ಕೆಲಸ ಮಾಡಲಿ. ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಡದಿ ಭಾಗದಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ನಿಗದಿಗಿಂತ ಹತ್ತು ಪಟ್ಟು ಹೆಚ್ಚು ಭಾರದ ಗ್ರಾನೈಟ್ ಕಲ್ಲುಗಳು, ಎಂಸ್ಯಾಂಡ್, ಜಲ್ಲಿ ಮತ್ತು ಮರಳು ಹೊತ್ತು ಸಾಗುತ್ತಿವೆ. ಇದರ ಬಗ್ಗೆ ಪೋಲಿಸರಾಗಲಿ ಅಥವಾ ಇತರ ಇಲಾಖೆಯ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ರಸ್ತೆಗಳು ಹದಗೆಟ್ಟಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.