ಸ್ಮಶಾನಕ್ಕಾಗಿ ಚನ್ನಪಟ್ಟಣ ತಾಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಚನ್ನಪಟ್ಟಣ, ಆಗಸ್ಟ್, 09: ಹನುಮಾಪುರದ ದೊಡ್ಡಿ ಗ್ರಾಮದಲ್ಲಿ ಸೋಮವಾರ ರಾತ್ರಿ 60 ವರ್ಷದ ಕರಿಯಪ್ಪ ಎಂಬುವವರು ನಿಧನರಾಗಿದ್ದರು. ಆದರೆ ಅವರ ಶವಸಂಸ್ಕಾರಕ್ಕೆ ಕೆಲ ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಚನ್ನಪಟ್ಟಣದ ತಾಲೂಕು ಕಛೇರಿ ಮುಂದೆ ಇಟ್ಟು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಹನುಮಾಪುರದ ದೊಡ್ಡಿ ಗ್ರಾಮದ ಸ್ಮಶಾನವನ್ನು ಕೆಲವು ಪ್ರಭಾವುಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದೀಗ ಸ್ಮಶಾನದ ಜಾಗವನ್ನು ನಮ್ಮ ಖಾಸಗಿ ಆಸ್ತಿ ಎಂದು ಶವಸಂಸ್ಕಾರ ಮಾಡಲು ಅಡ್ಡಿಪಡಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶವವನ್ನು ತಾಲೂಕು ಕಛೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.
ದೊಡ್ಡಿ ಗ್ರಾಮದಲ್ಲಿ 60 ವರ್ಷದ ಕರಿಯಪ್ಪ ಎಂಬುವವರು ಸೋಮವಾರ ರಾತ್ರಿ ಮೃತಪಟ್ಟಿದ್ದರು. ಗ್ರಾಮದಲ್ಲಿರುವ ಸ್ಮಶಾನದಲ್ಲಿ ಮೃತನ ಅಂತ್ಯಸಂಸ್ಕಾರವನ್ನು ಮಾಡಲು ಸಂಬಂಧಿಕರು ಮತ್ತು ಗ್ರಾಮಸ್ಥರು ಮುಂದಾಗಿದ್ದರೆ. ಸ್ಮಶಾನ ಅತಿಕ್ರಮ ಮಾಡಿರುವ ಕೆಲವರು ಮೃತ ಕರಿಯಪ್ಪ ಅವರ ಅಂತ್ಯಸಂಸ್ಕಾರ ಮಾಡಲು ಬಿಡದೆ ಅಡ್ಡಿಪಡಿಸಿದರು. ಆದ್ದರಿಂದ ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸ್ಮಶಾನ ಜಾಗ ಒತ್ತುವರಿ:
ಹನುಮಾಪುರದ ದೊಡ್ಡಿ ಗ್ರಾಮದಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಸ್ಮಶಾನವಾಗಿ ಉಪಯೋಗಿಸುತ್ತಿದ್ದ ಜಾಗವನ್ನು ಕೆಲವರು ಇದು ನಮ್ಮ ಖಾಸಗಿ ಜಮೀನು ಎಂದು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಸಾವುಗಳು ಸಂಭವಿಸಿದಾಗ ಅಂತ್ಯಸಂಸ್ಕಾರಕ್ಕೆ ತೊಂದರೆ ಆಗುತ್ತಿದೆ. ಹಲವು ವರ್ಷಗಳಿಂದ ಸ್ಮಶಾನವಾಗಿದ್ದ ಜಾಗದಲ್ಲಿ ಶವಸಂಸ್ಕಾರ ಮಾಡಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸ್ಮಶಾನದ ಸಮಸ್ಯೆ ಬಗೆಹರಿಸುವಂತೆ ಹಲವು ತಿಂಗಳುಗಳಿಂದ ತಾಲೂಕು ಆಡಳಿತಕ್ಕೆ ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಸ್ಮಶಾನಕ್ಕಾಗಿ ಹಲವು ಬಾರಿ ಹೋರಾಟಗಳನ್ನು ಮಾಡಿದ್ದೇವೆ. ಸರ್ಕಾರ ಹಾಗೂ ಅಧಿಕಾರಿಗಳು ಇನ್ನೂ ನಮ್ಮ ನೆರವಿಗೆ ಧಾವಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಎರಡನೇ ಬಾರಿಗೆ ಶವವಿಟ್ಟು ಪ್ರತಿಭಟನೆ:
ಹನುಮಾಪುರದ ದೊಡ್ಡಿ ಗ್ರಾಮಸ್ಥರು ಕೆಲ ತಿಂಗಳುಗಳ ಹಿಂದೆ ಸ್ಮಶಾನ ಜಾಗಕ್ಕಾಗಿ ಮೃತದೇಹದೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ತಹಶೀಲ್ದಾರ್ ನಾಗೇಶ್ ಪ್ರತಿಭಟನೆ ತಡೆದಿದ್ದು, ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸರ್ವೇ ನಡೆಸಿ ಒತ್ತುವರಿ ಬಿಡಿಸಿ ಸಮಸ್ಯೆ ಬಗೆಹರಿಸಿದ್ದರು. ತಹಶೀಲ್ದಾರ್ ನಾಗೇಶ್ ವರ್ಗಾವಣೆ ಆದ ಬೆನ್ನಲ್ಲೇ ಮತ್ತೆ ಸ್ಮಶಾನ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು ಶವಸಂಸ್ಕಾರ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಮೃತದೇಹವನ್ನು ನಗರಕ್ಕೆ ತಂದು ಪ್ರತಿಭಟನೆ ನಡೆಸಿದ್ದಾರೆ.
ತಹಶೀಲ್ದಾರ್ ನೀಡಿದ ಭರಸೆ?:
Recommended Video
ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ಸುದರ್ಶನ್ ಸ್ಮಶಾನದ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಇಂದೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಸ್ಮಶಾನ ಜಾಗ ಒತ್ತುವರಿ ಆಗಿದ್ದಲ್ಲಿ ಯಾವುದೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಅಥವಾ ಸರ್ಕಾರ ಗುರುತಿಸಿರುವ ಸ್ಮಶಾನ ಜಾಗದ ಸಮಸ್ಯೆ ಇದ್ದರೆ, ತಕ್ಷಣವೇ ಶವಸಂಸ್ಕಾರಕ್ಕೆ ಬದಲಿ ಜಾಗ ಗುರುತಿಸಿ ಮುಂಜೂರು ಮಾಡಿಕೊಡುವುದಾಗಿ ತಹಶೀಲ್ದಾರ್ ಸುದರ್ಶನ್ ತಿಳಿಸಿದರು.