ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ ವರ್ಗಾವಣೆ ಖಂಡಿಸಿ ಪ್ರತಿಭಟನೆ
ರಾಮನಗರ, ಆಗಸ್ಟ್ 03: ರಾಮನಗರ ಜಲ್ಲೆ ಚನ್ನಪಟ್ಟಣದ ತಹಶೀಲ್ದಾರ್ ಸುದರ್ಶನ್ ಅವರನ್ನು ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಖಂಡಿಸಿ ಇಂದು ಚನ್ನಪಟ್ಟಣದ ಸಮಾನ ಮನಸ್ಕರ ಒಕ್ಕೂಟ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಕುಳಿತು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸುದರ್ಶನ್ ರವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಯಾವ ಕಾರಣವೂ ಇಲ್ಲದೇ ಅವರನ್ನು ಏಕಾಏಕಿ ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಪ್ರಾಮಾಣಿಕ ಅಧಿಕಾರಿಗಳಿಗೆ ನೆಲೆಯಿಲ್ಲ ಎಂದು ಸಂದೇಶವನ್ನು ರಾಜ್ಯ ಸರ್ಕಾರ ಸಾರುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ಖಂಡಿಸಿ ಹೋರಾಟಕ್ಕೆ ನಿರ್ಣಯ
ಇನ್ನು ಮುಂದಿನ 15 ದಿನಗಳಲ್ಲಿ ಅವರನ್ನು ಮತ್ತೆ ಚನ್ನಪಟ್ಟಣಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ಕೊಟ್ಟರು.
ಇದೇ ಸಂದರ್ಭದಲ್ಲಿ ನೂತನವಾಗಿ ಚನ್ನಪಟ್ಟಣಕ್ಕೆ ವರ್ಗವಾಗಿ ಬಂದಿರುವ ತಹಶೀಲ್ದಾರ್ ನಾಗೇಶ್ ರವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ತಿಳಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.