ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ
ರಾಮನಗರ, ಜುಲೈ 10: ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ವಾಟಾಳ್ ನಾಗರಾಜ್ ಇಂದು ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಆನ್ ಲೈನ್ ಶಿಕ್ಷಣ ವ್ಯವಸ್ಥೆಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಆನ್ ಲೈನ್ ಶಿಕ್ಷಣ ವ್ಯವಸ್ಥೆಯ ಅಣಕು ಶವಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮನೆಯಲ್ಲಿ ಕುಳಿತು ತಜ್ಞರು ನೀಡಿರುವ ವರದಿಯನ್ನು ತಿರಸ್ಕರಿಸಬೇಕು. ಮಧ್ಯಮ ವರ್ಗದ ಮಕ್ಕಳು ಲಾಪ್ ಟಾಪ್ ಗಾಗಿ 50 ಸಾವಿರ ರೂಪಾಯಿ ವೆಚ್ಚ ಮಾಡುವಷ್ಟು ಶಕ್ತರಾಗಿಲ್ಲ. ಗ್ರಾಮೀಣ ಭಾಗದಲ್ಲಿ ಸರಿಯಾದ ಇಂಟರ್ನೆಟ್ ಸಂಪರ್ಕವಿಲ್ಲ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುತ್ತದೆ, ಆದ್ದರಿಂದ ಆನ್ ಲೈನ್ ಶಿಕ್ಷಣ ಖಂಡಿತವಾಗಿ ಬೇಡ ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರ ಮೊದಲು ಜನರ ಜೀವ ಉಳಿಸಲಿ. ನಂತರ ಆನ್ ಲೈನ್ ಶಿಕ್ಷಣ ಪ್ರಾರಂಭಿಸಲಿ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ವೈದ್ಯರ ಕೊರತೆ ಕಾಣುತ್ತಿದೆ. ಸರ್ಕಾರ ಈ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ಅದಕ್ಕಾಗಿ ನಾಳೆಯಿಂದ ಕನ್ನಡ ಚಳವಳಿ ವಾಟಾಳ್ ಪಕ್ಷ ರಾಜ್ಯಾದ್ಯಂತ ಚಳವಳಿ ಪ್ರಾರಂಭ ಮಾಡುವುದಾಗಿ ವಾಟಾಳ್ ನಾಗರಾಜ್ ಘೋಷಣೆ ಮಾಡಿದರು.