ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ; ಚನ್ನಪಟ್ಟಣದಲ್ಲಿ ಪ್ರತಿಭಟನೆ
ರಾಮನಗರ, ನವೆಂಬರ್ 17: ರಾಜ್ಯಾದ್ಯಂತ ಕೊರೊನಾ ಸಂಕಷ್ಟ, ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗದೆ ಮರಾಠಿಗರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ 50 ಕೋಟಿ ರೂಪಾಯಿಗಳನ್ನು ಅವರ ಅಭಿವೃದ್ಧಿಗೆ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಂಗಳವಾರ ಚನ್ನಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಇಡೀ ರಾಜ್ಯವೇ ಕೊರೊನಾದ ಸಂದಿಗ್ಧ ಪರಿಸ್ಥಿತಿ ಎದುರಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಎಲ್ಲಾ ಉದ್ಯಮಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಜನರು ಕೆಲಸ ಕಾರ್ಯಗಳಿಲ್ಲದೇ ಪರಿತಪಿಸುತ್ತಿದ್ದಾರೆ. ಮನೆ-ಬದುಕನ್ನು ಕಳೆದುಕೊಂಡು ಪರದಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ನೆರವಾಗುವ ಕೆಲಸವನ್ನು ಮಾಡದ ಸರ್ಕಾರ ಓಟಿಗಾಗಿ ಬೇರೆ ಭಾಷಿಗರನ್ನು ಓಲೈಸುವ ಸಲುವಾಗಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅವರಿಗೆ ಬಕೆಟ್ ಹಿಡಿಯುವ ಕೆಲಸಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್ ಕರೆ
ಹಗಲು ರಾತ್ರಿ ಎನ್ನದೇ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಕೆಎಸ್ ಆರ್ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಸಂಬಳ ನೀಡಲಾಗದ ರಾಜ್ಯ ಸರ್ಕಾರಕ್ಕೆ ಅನ್ಯ ಭಾಷಿಗರನ್ನು ಉದ್ಧಾರ ಮಾಡಲು ಹೊರಟಿರುವುದು ಎಷ್ಟು ಸರಿ? ಇಂದು ಮರಾಠಿಗರನ್ನು ಉದ್ಧಾರ ಮಾಡಲು ಹೊರಟಿರುವ ಸರ್ಕಾರ ಮುಂದಿನ ದಿನಗಳಲ್ಲಿ ತಮಿಳು, ತೆಲಗು, ಮಾರ್ವಾಡಿ ಮಂಡಳಿಗಳನ್ನು ಸ್ಥಾಪನೆ ಮಾಡಲು ಕೂಡ ಮುಂದಾಗಲಿದೆ. ಓಟಿಗಾಗಿ ಅನ್ಯ ಭಾಷಿಗರ ಓಲೈಕೆಗೆ ಮುಂದಾದ ಸರ್ಕಾರಕ್ಕೆ ನಮ್ಮೆಲ್ಲರ ಧಿಕ್ಕಾರವಿದೆ ಎಂದರು.
Recommended Video
ಹತ್ತು ದಿನದೊಳಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲು ಹೊರಡಿಸಿರುವ ಆದೇಶವನ್ನು ಹಿಂಪಡೆಯದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.