ಆಶ್ರಮಕ್ಕೆ ಬೀಗ ಜಡಿಯದಿದ್ದರೆ ನಾವೇ ಮಠಕ್ಕೆ ನುಗ್ಗುತ್ತೇವೆ; ನಿತ್ಯಾನಂದ ವಿರುದ್ಧ ಪ್ರತಿಭಟನೆ
ರಾಮನಗರ, ನವೆಂಬರ್ 26: ಬಿಡದಿಯ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಗೈರಾಗಿರುವುದನ್ನು ಖಂಡಿಸಿ ರಾಮನಗರದಲ್ಲಿ ನಿತ್ಯಾನಂದನ ಅಣಕು ಶವ ಯಾತ್ರೆ ನಡೆಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದ ಐಜೂರು ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಮೇಶಗೌಡ, "ನಿತ್ಯಾನಂದ ಮತ್ತು ಚಿತ್ರನಟಿ ರಂಚಿತ ರಾಸಲೀಲೆ ಪ್ರಕರಣ ನಡೆದು ಹತ್ತು ವರ್ಷಗಳು ಕಳೆದರೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ನಿತ್ಯಾನಂದ ಪದೇ ಪದೇ ಆರೋಪಗಳಿಗೆ ಗುರಿಯಾಗುತ್ತಿದ್ದರೂ ಸರ್ಕಾರಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರ ಒಂದು ತಿಂಗಳಿನ ಒಳಗೆ ನಿತ್ಯಾನಂದನ ಮೇಲೆ ಕಠಿಣ ಕ್ರಮ ಜರುಗಿಸಿ ಆಶ್ರಮಕ್ಕೆ ಬೀಗ ಜಡಿಯದಿದ್ದರೆ ನಾವೇ ಮಠಕ್ಕೆ ನುಗ್ಗುತ್ತೇವೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಡದಿಯ ನಿತ್ಯಾನಂದ ದಕ್ಷಿಣ ಅಮೆರಿಕಕ್ಕೆ ಪರಾರಿಯಾಗಿದ್ದು ಹೇಗೆ?
ನಿತ್ಯಾನಂದ ಹತ್ತಾರು ಪ್ರಕಣಗಳಲ್ಲಿ ನ್ಯಾಯಾಲಯ ಹಾಜರಾಗದೆ ಅಗೌರವ ತೋರಿದ್ದಾನೆ. ಅಲ್ಲದೇ ಕೋರ್ಟ್ ವಿಚಾರಣೆಯನ್ನು ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗಿರುವ ನಿತ್ಯಾನಂದನನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.