ರಾಮನಗರ; ಅಪಘಾತದಲ್ಲಿ ಖಾಸಗಿ ವಾಹಿನಿ ಜಿಲ್ಲಾ ವರದಿಗಾರ ನಿಧನ
ರಾಮನಗರ, ಏಪ್ರಿಲ್ 21: ಎಟಿಎಂಗೆ ಹಣ ತುಂಬುವ ವಾಹನ ಡಿಕ್ಕಿ ಹೊಡೆದು ಅಪಘಾತದಲ್ಲಿ ಕರ್ತವ್ಯ ನಿರತ ಖಾಸಗಿ ವಾಹಿನಿಯ ವರದಿಗಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ ಜೈಲಿನಿಂದ ಕೈದಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿದ್ದ ಸುದ್ದಿ ವರದಿ ಮಾಡುತ್ತಿದ್ದ ಸಂದರ್ಭ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಪಬ್ಲಿಕ್ ಟಿ.ವಿ. ರಾಮನಗರ ಜಿಲ್ಲಾ ವರದಿಗಾರ ಹನುಮಂತು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ
ರಾಮನಗರದ ಶಂಕರ್ ನಾಟಿಕೋಳಿ ಡಾಬಾ ಬಳಿ ವೇಗವಾಗಿ ಬಂದ ಎಟಿಎಂ ವಾಹನ ಹನುಮಂತು ಅವರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ತಲೆಗೆ ಪೆಟ್ಟು ಬಿದ್ದು, ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗೆ ರಾಮನಗರ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.
ಹನುಮಂತು ಅವರು ಕಳೆದ 6 ವರ್ಷಗಳಿಂದ ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ವಿವಾಹವಾಗಿ ಮೂರು ವರ್ಷವಾಗಿದ್ದು, ಒಂದು ವರ್ಷದ ಮಗುವಿದೆ. ಹನುಮಂತು ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ವರದಿಗಾರ ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹನುಮಂತು ಅವರ ಕುಟುಂಬಕ್ಕೆ ವೈಯಕ್ತಿಕ 5 ಲಕ್ಷ ಪರಿಹಾರ ಘೋಷಿಸಿದ್ದು, ಆರೋಗ್ಯ ಸಮಸ್ಯೆ ಇರುವ ಹನುಮಂತು ಅವರ ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರುವುದಾಗಿ ತಿಳಿಸಿದ್ದಾರೆ.
"ನನಗೆ ಆತ್ಮೀಯರಾಗಿದ್ದ ಹನುಮಂತು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ದಿಟ್ಟ ಪತ್ರಕರ್ತರಾಗಿದ್ದರು. ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಕರ್ತವ್ಯ ನಿರ್ವಹಣೆ ವೇಳೆ ಪ್ರಾಣತೆತ್ತ ಹನುಮಂತು ಅವರ ಆತ್ಮಕ್ಕೆ ಶಾಂತಿ ದಕ್ಕಲಿ" ಎಂದು ಟ್ವೀಟ್ ಮಾಡಿದ್ದಾರೆ.