ರಾಮನಗರ: ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು, ಫೇಸ್ಬುಕ್ನಲ್ಲಿ ಫೋಟೋ ಶೇರ್ ಮಾಡಿದ ಕೈದಿ
ರಾಮನಗರ, ಸೆಪ್ಟೆಂಬರ್ 14 : ಕಾರಾಗೃಹಗಳು ಅಪರಾಧ ಎಸಗಿದ ವ್ಯಕ್ತಿಗಳ ಮನಃ ಪರಿವರ್ತನೆಯ ತಾಣಗಳಾಗಬೇಕು. ಆದರೆ, ಅಪರಾಧಿಗಳ ಮೋಜು ಮಸ್ತಿಯ ತಾಣಗಳಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಕೊಲೆ ಆರೋಪಿಯೊಬ್ಬ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಕೇಕ್ ಕಟ್ ಮಾಡುವ ಪೋಟೋಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಪೋಸ್ಟ್ ಮಾಡುವ ಮೂಲಕ ಜೈಲಿನ ಉಳುಕುಗಳನ್ನು ಬಯಲು ಮಾಡಿದ್ದಾನೆ.
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದವರು ಹುಟ್ಟುಹಬ್ಬ ಆಚರಿಸಿಕೊಂಡು ಫೇಸ್ಬುಕ್ನಲ್ಲಿ ಫೋಟೊ ಪೋಸ್ಟ್ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಬೆಳ್ಳಂ ಬೆಳಗ್ಗೆಯೇ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ಪೋಲಿಸರು ರೇಡ್ ಮಾಡಿದೆ. ಈ ವೇಳೆ ಕಾರಾಗೃಹದಲ್ಲಿರುವ ಕೈದಿಗಳನ್ನ ಪರಿಶೀಲನೆ ಮಾಡಿ ಎರಡು ಮೊಬೈಲ್ ಹಾಗೂ ಮೂರು ಸಿಮ್ ಕಾರ್ಡ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಉಡುಪಿ: ದುರ್ಗಾ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಪ್ರಗತಿಪರ ಕೃಷಿಕ ಆತ್ಮಹತ್ಯೆ
ಎಸ್ಪಿ ಸಂತೋಷ್ ಬಾಬು ಪ್ರತಿಕ್ರಿಯೆ
ಕೊಲೆ ಪ್ರಯತ್ನ ಪ್ರಕರಣದಲ್ಲಿ ಜೈಲಿನಲ್ಲಿರುವ ಮಹೇಶ್ ಗೌಡ, ಸೈಯ್ಯದ್ ಮಲ್ಲಿಕ್, ಸುಬ್ಬಯಾರ್, ದಿಲೀಪ್, ಯಶ್ವಂತ್, ಯೋಗೇಶ್ ಹಾಗೂ ಪೊಕ್ಸೋ ಪ್ರಕರಣದ ಆರೋಪಿ ಗಿರೀಶ್, 302 ಕೇಸ್ನಲ್ಲಿರುವ ಆರೋಪಿ ಚಂದ್ರುರನ್ನು ವಿಚಾರಣೆ ನಡೆಸಲಾಗಿದೆ. ಕೋರ್ಟ್ನಲ್ಲಿ ಅನುಮತಿ ಕೋರಿ ಈ ಎಲ್ಲಾ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಹೇಳಿದ್ದಾರೆ.
ಜೈಲಿನ ಒಳಗೆ ಮೊಬೈಲ್ ಎಲ್ಲಿಂದ ಬಂತು ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಜೈಲಿನ ಸಿಬ್ಬಂದಿಗಳನ್ನೂ ಸಹ ನಿರ್ಲಕ್ಷ್ಯತನವೇ ಅಥವಾ ಘಟನೆಯಲ್ಲಿ ಸಿಬ್ಬಂದಿಗಳೂ ಭಾಗಿಯಾಗಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ.
ಜೈಲು ಅಕ್ರಮಗಳಿಗೆ ಮಿತಿಯಿಲ್ಲ
ಜೈಲಿನಲ್ಲಿ ಅವ್ಯವಹಾರ, ರಾಜಾತಿಥ್ಯಾ, ಸ್ವರ್ಗ ತಾಣ ಅಂತೆಲ್ಲಾ ಪರಪ್ಪನ ಅಗ್ರಹಾರ ಜೈಲಿನ ವ್ಯವಸ್ಥೆ ಬಗ್ಗೆ ಟೀಕೆಟಿಪ್ಪಣಿಗಳು, ಒಂದಷ್ಟು ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಬಾರೀ ಸದ್ದು ಮಾಡಿತ್ತು. ಅದರಲ್ಲೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆ ಕೊಡುವಂತೆ ವಿರೋಧ ಪಕ್ಷಗಳು ಕೆಂಡಕಾರಿದ್ದವು. ಈ ಎಲ್ಲಾ ಬೆಳವಣಿಗೆ ಬಳಿಕ ಖುದ್ದು ಎಡಿಜಿಪಿ, ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದಷ್ಟು ಜನರ ತಲೆದಂಡ ಮಾಡಿದ್ದರು. ಹೀಗಿದ್ದರು ಸಹಾ ಮತ್ತೆ ಅಂತಹದ್ದೇ ಚರ್ಚೆಗೆ ಇದೀಗ ರಾಮನಗರ ಜಿಲ್ಲಾ ಕಾರಾಗೃಹ ಚರ್ಚೆಗೆ ಗ್ರಾಸವಾಗಿದೆ.