ರಾಮನಗರದಲ್ಲಿ ಕೊಂಡಕ್ಕೆ ಬಿದ್ದು ಅರ್ಚಕನಿಗೆ ಗಂಭೀರ ಗಾಯ
ರಾಮನಗರ, ಏಪ್ರಿಲ್ 29: ಕೊಂಡ ಹಾಯುವ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದು, ಅರ್ಚಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಕೊಂಡ ಮಹೋತ್ಸವದಲ್ಲಿ ನಡೆದಿದೆ.
ಇಂದು ಭಾನುವಾರ ಬೆಳಗ್ಗೆ ಹಬ್ಬದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಕೊಂಡ ಮಹೋತ್ಸವದಲ್ಲಿ ಕೊಂಡ ತುಳಿಯುವ ವೇಳೆ ಆಯತಪ್ಪಿ ಅರ್ಚಕ ವಿಜಯ್ ಕುಮಾರ್ ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೊಂಡದಲ್ಲಿ ಬಿದ್ದ ಅರ್ಚಕ ವಿಜಯ್ ಕುಮಾರ್ ರಕ್ಷಿಸಲು ಹೋದ ಇನ್ನಿಬ್ಬರು ಅರ್ಚಕರಾದ ರುದ್ರೇಶ್ ಮತ್ತು ಮಂಜುನಾಥ್ ಗೂ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ.
ರಾಮನಗರ : ಕೊಂಡ ಹಾಯುವಾಗ ಬಿದ್ದು ಅರ್ಚಕರಿಗೆ ಗಾಯ
ತಕ್ಷವೇ ಸ್ಥಳದಲ್ಲಿದ್ದ ಜನರು ಗಾಯಗೊಂಡ ಅರ್ಚಕ ವಿಜಯ್ ಕುಮಾರ್, ರುದ್ರೇಶ್ ಮತ್ತು ಮಂಜುನಾಥ್ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಾಯಗೊಂಡ ವಿಜಯ್ ಕುಮಾರ್ ಗೆ ಹಲವಾರು ವರ್ಷಗಳಿಂದ ಕೊಂಡ ತುಳಿದ ಅನುಭವ ಇದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತಿಂಗಳ ಹಿಂದೆಯಷ್ಟೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವರ ಹಬ್ಬದಲ್ಲಿ ಕೊಂಡ ಹಾಯ್ಯುವಾಗ ಆಕಸ್ಮಿಕವಾಗಿ ಬಿದ್ದು ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು.