ಹುಬ್ಬಳ್ಳಿ ಬ್ಲಾಸ್ಟ್ ಎಫೆಕ್ಟ್; ರಾಮನಗರದಲ್ಲೂ ಈಗ ಪೊಲೀಸ್ ಹೈ ಅಲರ್ಟ್
ರಾಮನಗರ, ಅಕ್ಟೋಬರ್ 25: ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರದ ಎಲ್ಲಾ ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸುವ ಮೂಲಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ರಾಮನಗರ, ಚನ್ನಪಟ್ಟಣ ಹಾಗೂ ಬಿಡದಿ ಪಟ್ಟಣದ ರೈಲ್ವೆ ಸ್ಟೇಷನ್, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪ್ರತಿ ದಿನ ಶ್ವಾನದಳ ಹಾಗೂ ಬಾಂಬ್ ನಿಗ್ರಹ ದಳಗಳು ಶೋಧಕಾರ್ಯ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಾಕ್ಸ್ ಬಂದಿದ್ದು ಎಲ್ಲಿಂದ?
ರಾಮನಗರದಲ್ಲಿ ಕಳೆದ ವರ್ಷ 2018ರಲ್ಲಿ ಬಾಂಗ್ಲಾ ಮೂಲದ ಶಂಕಿತ ಉಗ್ರ ಮುನಿರ್ ಶೇಖ್ ನನ್ನು ಎಎನ್ಐ ತನಿಖಾ ತಂಡ ಬಂಧಿಸಿತ್ತು. ಅಲ್ಲದೇ ಮನಿರ್ ಶೇಖ್ ಸಹಚರ ಅಭಿಬುಲ್ ರೆಹಮಾನ್ ಎರಡು ತಿಂಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ ವೇಳೆ ಆತನು ನೀಡಿದ ಮಾಹಿತಿ ಮೇರೆಗೆ ಎರಡು ಸಜೀವ ಬಾಂಬ್ ಗಳು ಪತ್ತೆಯಾಗಿದ್ದವು.
ಅಲ್ಲದೇ ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಉಗ್ರ ಸಂಘಟನೆಯ ಸ್ಲೀಪರ್ ಸೆಲ್ ಗಳು ಇನ್ನೂ ಸಕ್ರಿಯವಾಗಿವೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ಸೆರಗಿನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.