ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಲು ಪಿಎಸ್ಐ ಹಗರಣ ಬಯಲು ಮಾಡಿದ ಪೊಲೀಸ್ ಇಲಾಖೆ- ಎಚ್ಡಿಕೆ
ಚನ್ನಪಟ್ಟಣ, ಮೇ 4: ಚಾಮರಾಜಪೇಟೆಯ ಕೊಲೆ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿ ಕಮಲ್ ಪಂಥ್ ಅವರನ್ನು ಅವಮಾನ ಮಾಡಿದ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಲು ಪೋಲಿಸ್ ಇಲಾಖೆ ಪಿಎಸ್ಐ ನೇಮಕಾತಿ ಹಗರಣವನ್ನು ಬಯಲಿಗೆಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ನಿನ್ನೆ ಕುಣಿಗಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಚನ್ನಪಟ್ಟಣ ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಮೂವರು ಮಂದಿ ಮೃತಪಟ್ಟಿದ್ದು. ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೃತರ ನಿವಾಸಕ್ಕೆ ಭೇಟಿ ನೀಡಿ ಪಾರ್ಥಿವ ಶರೀರದ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಚಾಮರಾಜಪೇಟೆ ಬಳಿ ಹೊತ್ತಿ ಉರಿದ ಬಸ್ : 30 ಪ್ರಯಾಣಿಕರು ಸೇಫ್
ರಾಜ್ಯವನ್ನು ಬೆಚ್ಚಿಬೀಳಿಸಿರುವ ಪಿಎಸ್ಐ ನೇಮಕಾತಿ ಹಗರಣದ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಹಗರಣ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂದ ಇದೆ ಪಿಎಸ್ಐ ಹಗರಣದ ಹಿಂದೆ ದೊಡ್ಡ ಕಥೆಯೇ ಇದೇ ಎಂದು ಮಾಜಿ ಸಿಎಂ ಹೆಚ್ಡಿಕೆ ಘಟನೆಯ ಒಳ ಸುಳಿಯನ್ನು ಬಿಚ್ಚಿಟ್ಟರು.
ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂಥ್ ವಿರುದ್ಧ ಚಾಮರಾಜಪೇಟೆಯ ಗೋರಿ ಪಾಳ್ಯದಲ್ಲಿ ಮಧ್ಯ ರಾತ್ರಿ ನಡೆದ ಕೊಲೆಯ ವಿಚಾರವಾಗಿ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆ ಯುವಕನ ಕೊಲೆ ನಡೆಯಲು ಆಕ್ಸಿಡೆಂಟ್ ಕಾರಣ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ವಿಚಾರವಾಗಿ ಗಲಾಟೆಯಾಗಿ ಕೊಲೆಯಾಯ್ತು ಎಂದು ಕಥೆ ಕಟ್ಟಿದ್ದರು. ಆ ಘಟನೆ ಹಿನ್ನಲೆಯಲ್ಲಿ ಪಿಎಸ್ಐ ಹಗರಣ ಲಿಂಕ್ ಆಗಿದೆ.
ನಿಷ್ಠಾವಂತ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ವ್ಯಕ್ತಿ ಹಾಗೂ ಪಿಎಸ್ಐ ಹಗರಣದಲ್ಲಿ ಕಲಬುರ್ಗಿಯಲ್ಲಿ ಅರೆಸ್ಟ್ ಆಗಿರುವವರಿಗೂ ಲಿಂಕ್ ಇತ್ತು. ಆ ವ್ಯಕ್ತಿಗೆ ಬುದ್ದಿ ಕಲಿಸಲು ಪಿಎಸ್ಐ ಹಗರಣ ಫಿಕ್ಸ್ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಪಿಎಸ್ಐ ಹುದ್ದೆಗಾಗಿ ಎಲ್ಲರೂ ದುಡ್ಡು ಕೊಟ್ಟಿದ್ದಾರೆ ಎನ್ನಲು ಆಗಲ್ಲ, ಪಿಎಸ್ಐ ಹುದ್ದೆಗೆ ಆಯ್ಕೆಯಾದವರಲ್ಲಿ 30 % ದುಡ್ಡು ಕೊಟ್ಟು ಆಯ್ಕೆಯಾಗಿರಬಹುದು, ಇನ್ನೂ
30 - 40 % ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು. ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂಥ್ ಗೆ ಅವಮಾನ ಮಾಡಿದ್ದರು. ಬಿಜೆಪಿ ನಾಯಕರು ಸರ್ಕಾರಕ್ಕೆ ಬುದ್ಧಿ ಕಲಿಸಲು ಪೊಲೀಸ್ ಇಲಾಖೆಯಿಂದಲೇ ಇದು ಹೊರಬಂದಿದೆ ಇದು ಸರ್ಕಾರದಿಂದ ಹೊರಬಂದ ಹಗರಣವಲ್ಲ ಎಂದು ಹೇಳಿದರು.
ಬಿಜೆಪಿಯವರು ಅವರ ಮನೆಗೆ ಅವರೇ ಬೆಂಕಿ ಹಚ್ಚಿಕೊಳ್ಳುತ್ತಾರೆ:
ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಚಿವರ ಪಾತ್ರವಿದೆ ಎಂದು ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರ ಬಳಿ ದಾಖಲೆ ಎಲ್ಲಿದೆ. ಅಶ್ವಥ್ ನಾರಾಯಣ ವಿರುದ್ಧ ದಾಖಲೆ ಎಲ್ಲಿದೆ. ಕಾಂಗ್ರೆಸ್ನವರಿಗೆ ರಿಯಲ್ ಇಶ್ಯೂ ಮೇಲೆ ಹೋರಾಟ ಮಾಡುವ ಶಕ್ತಿಯಿಲ್ಲ. ಯಾರೋ ಹೇಳಿದನ್ನ ಹೇಳ್ಕೋತ್ತಾರೆ ಅಷ್ಟೇ ಎಂದು ಮಾಜಿ ಸಿಎಂ ಹೆಚ್ಡಿಕೆ ಟೀಕಿಸಿದರು.
ಅಶ್ವಥ್ ನಾರಾಯಣ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅಶ್ವಥ್ ನಾರಾಯಣ್ ಮೇಲಿನ ಆರೋಪವನ್ನು ಎಕ್ಸ್ಪೋಸ್ ಮಾಡಲು ಬಿಜೆಪಿ ನಾಯಕರೆ ಹೊರತೆಗೆದಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿಕೆ ತಿಳಿಸಿದರು.
ಅಶ್ವಥ್ ನಾರಾಯಣ್ ಮೇಲಿನ ಆರೋಪ ಅಮಿತ್ ಷಾ ತಲೆಗೆ ಹೋಗಲಿ ಎಂದು ಮಾಹಿತಿ ಹೊರಹಾಕಿದ್ದಾರೆ. ಅಶ್ವಥ್ ನಾರಾಯಣ್ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ನಡೆಸಿರುವ ಹುನ್ನಾರ ಇದು. ಇಲ್ಲಿ ಅವರ ಮನೆಗೆ ಅವರೇ ಬೆಂಕಿ ಹಚ್ಚಿಕೊಳ್ತಾರೆ ಬಿಜೆಪಿಯವರು. ನಾವು ಹಚ್ಚಬೇಕಿಲ್ಲ, ನಾನು ಮತ್ತೆ ಪೆಟ್ರೋಲ್ ತೆಗೆದುಕೊಂಡು ಹೋಗ್ಲಾ ಸುರಿಯೋಕೆ ಎಂದರು.
ಕಮಲ್ ಪಂಥ್ಗೆ ಅವಮಾನ ಮಾಡದಿದ್ದರೆ ಈ ವಿಚಾರ ಹೊರ ಬರುತ್ತಿರಲಿಲ್ಲ. ಪಿಎಸ್ಐ ಹಗರಣವನ್ನು ಹೂತು ಹಾಕುತ್ತಿದ್ದರು. ಹಗರಣದಲ್ಲಿ ಯಾರೇ ಭಾಗಿಯಾಗಿ ಅಕ್ರಮ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.