ಗಾಂಜಾ ಮಾರಾಟ ಜಾಲ ಭೇದಿಸಿದ ರಾಮನಗರ ಜಿಲ್ಲಾ ಪೊಲೀಸರು: 5 ಲಕ್ಷ ರೂ. ಮೌಲ್ಯದ ಗಾಂಜಾ ವಶ
ರಾಮನಗರ, ಅಕ್ಟೋಬರ್ 6: ಮಾಯಾನಗರಿ ಬೆಂಗಳೂರಿನ ಸೆರಗಿನಲ್ಲಿರುವ ರೇಷ್ಮೆನಗರಿ ರಾಮನಗರ ನಶೆಯ ನಗರಿಯಾಗುತ್ತಿದೆಯಾ ಎಂಬ ಆತಂಕ ನಾಗರಿಕರಲ್ಲಿ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಎರಡು ಮೂರು ದಿನಗಳ ಅವಧಿಯಲ್ಲಿ ಪೊಲೀಸರು ದಾಳಿ ಮಾಡಿ 5 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು, ರಾಮನಗರ, ಮಾಗಡಿ, ಕನಕಪುರ ಮತ್ತು ಕಗ್ಗಲೀಪುರಗಳಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಕಾರು, ಬೈಕ್ ಸೇರಿದಂತೆ 5 ಲಕ್ಷ ಮೌಲ್ಯದ 5 kg ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸರಣಿ ದಾಳಿಯ ಮೂಲಕ ಅಂತರರಾಜ್ಯ ಗಾಂಜಾ ಮಾರಾಟ ಜಾಲ ಸೇರಿದಂತೆ ಗಾಂಜಾ ಮಾರಾಟ ಮಾಡುತ್ತಿದ್ದ ಹಲವು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಯನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅಭಿನಂದಿಸಿದ್ದಾರೆ.
Recommended Video
ಅಂತರರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ
ಮಾಗಡಿ ತಾಲ್ಲೂಕಿನ ಹೊಸಹಳ್ಳಿ- ತಗ್ಗಿಕುಪ್ಪೆ ರಸ್ತೆಯ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮಾಗಡಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ಅಂತರರಾಜ್ಯ ಗಾಂಜಾ ಮಾರಾಟ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಡಿ ಆದಿತ್ಯ ಕುಮಾರ್ ಬಾಬು, ಕೆ. ಕಿರಣ್ ಕಲ್ಯಾಣ್, ರುತ್ವಿಕ್ ಹಾಗೂ ದಿಲೀಪ್ @ದಲ್ಲು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಒಟ್ಟು 1,65,000 ರೂ. ಮೌಲ್ಯದ 1.6 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ 10 ಲಕ್ಷ ಮೌಲ್ಯದ ಒಂದು ಎರ್ಟಿಗಾ ಕಾರ್ ಹಾಗೂ 2,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಲ್ಲಿ ದಾಡಿ ಆದಿತ್ಯಕುಮಾರ್ ಬಾಬು ಹಾಗೂ ಕೆ.ಕಿರಣ್ ಕಲ್ಯಾಣ್ ಆಂಧ್ರಪ್ರದೇಶ ಜಿಲ್ಲೆಯ ವಿಶಾಖಪಟ್ಟಣಂ ಮೂಲದವರಾಗಿದ್ದು, ಅಲ್ಲಿನ ಖಾದರ್ ಎಂಬ ವ್ಯಕ್ತಿಯ ಕಡೆಯಿಂದ ಮಾದಕ ವಸ್ತುವನ್ನು ಪಡೆದು ಬೆಂಗಳೂರು ಹಾಗೂ ಸುತ್ತಮುತ್ತಲ ಕಡೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದರು.
ಬೆಂಗಳೂರಿನ ಸುತ್ತಮುತ್ತಲು ಗಾಂಜಾ ಮಾರಾಟ
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತರುತ್ತಿದ್ದ ಆದಿತ್ಯಕುಮಾರ್ ಮತ್ತು ಕಿರಣ್ ಕಲ್ಯಾಣ್ರಿಂದ ಗಾಂಜಾ ಪಡೆದು ರುತ್ವಿಕ್ ಹಾಗೂ ಇನ್ನೊಬ್ಬ ಆರೋಪಿಯಾದ ದಿಲೀಪ್ @ ದಲ್ಲು ಮಾದಕ ವಸ್ತುಗಳನ್ನು ಪಡೆದು ಮಾಗಡಿ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿದು ಬಂದಿದೆ.
ಗಾಂಜಾ ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ಆರೋಪಿಯಾದ ವಿಶಾಖಪಟ್ಟಣ ಮೂಲದ ಖಾದರ್ ಎಂಬಾತನ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಮನಗರ ಟೌನ್ ರೈಲ್ವೆ ಬ್ರಿಡ್ಜ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ನಗರ ಪೋಲಿಸ್ ಠಾಣೆಯ ಪೋಲಿಸರು ಸಾದಾತ್ ಮತ್ತು ಶ್ರೀನಿವಾಸ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೇ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಅಯೋಬ್ ಖಾನ್ ಮತ್ತು ಲೋಕಿ ಎಂಬ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 695.5 ಗ್ರಾಂ ಗಾಂಜಾ ಮತ್ತು 2500 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಸಾಯಿಖಾನೆಯ ಬಳಿ ಗಾಂಜಾ ಮಾರಾಟ
ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯ, ಎಡ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕಸಾಯಿಖಾನೆಯ ಬಳಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಾರೋಹಳ್ಳಿ ಪೊಲೀಸರು ದಾಳಿ ಮಾಡಿ ಮೋನಿಷ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಮೋನಿಷ್ ರೆಡ್ಡಿಯಿಂದ ಸುಮಾರು 2,40,000 ರೂ. ಮೌಲ್ಯದ 3 ಕೆಜಿ ತೂಕದ ಒಣ ಗಾಂಜಾ ಸೊಪ್ಪನ್ನು ಹಾಗೂ ಒಂದು ಬೈಕ್ ವಶಪಡಿಸಿಕೊಂಡು, ಬಂಧಿತನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಾವನದುರ್ಗ ಅರಣ್ಯ ಉದ್ಯಾನವನ ಮುಂಭಾಗದ ಗಾಂಜಾ ಸೇವನೆ
ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾರೆಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಚಾಮರಾಜನಗರ ಮೂಲದ ಸುರೇಶ್ ಎಂಬಾತನನ್ನು ಬಂಧಿಸಿ, ಆತನಿಂದ 750 ಗ್ರಾಂ ತೂಕದ ಒಣಗಿದ ಗಾಂಜಾ ಸೊಪ್ಪು, ಒಂದು ಚಿಕ್ಕ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನ ಸಮಯದಲ್ಲಿ ಸಾವನದುರ್ಗ ಅರಣ್ಯ ಇಲಾಖೆಯ ಉದ್ಯಾನವನ ಮುಂಭಾಗದ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ಸೋಮಣ್ಣ ಎಂಬಾತನ್ನು ವಶಕ್ಕೆ ತೆಗೆದುಕೊಂಡು ಆತನ ವಿರುದ್ಧ ಎನ್ಡಿಪಿಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.