ಪೊಲೀಸರ ಸೋಗಿನಲ್ಲಿ ಪ್ರೇಮಿಗಳಿಂದ ದೋಚುತ್ತಿದ್ದ ರಘು ಅಂದರ್
ರಾಮನಗರ, ನವೆಂಬರ್ 5: ರಾಮನಗರ ಗ್ರಾಮಾಂತರ, ಬಿಡದಿ, ಕುಂಬಳಗೂಡು, ಕಗ್ಗಲೀಪುರ ಹಾಗೂ ನೈಸ್ ಹೆದ್ದಾರಿಗಳಲ್ಲಿ ಸಿಸಿಬಿ ಪೊಲೀಸರು ಎಂದು ಬೆದರಿಸಿ ಪ್ರೇಮಿಗಳಿಂದ ಹಣ, ಆಭರಣ ವಸೂಲಿ ಮಾಡುತ್ತಿದ್ದ ಕನಕಪುರ ಮೂಲದ ರಘು ಎಂಬ ಕುಖ್ಯಾತ ಆರೋಪಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಡ್ರಾಪ್ ನೆಪದಲ್ಲಿ ಟೂರಿಸ್ಟ್ ಗೈಡ್ ದೋಚಿದ ದುಷ್ಕರ್ಮಿಗಳು
ಹೆದ್ದಾರಿ ಮಧ್ಯೆ ವಾಹನ ನಿಲ್ಲಿಸಿಕೊಂಡಿರುತ್ತಿದ್ದ ಯುವಕ ಯುವತಿಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಕೈ ಕೋಳ ತೋರಿಸಿ, ನಾವು ಸಿಸಿಬಿ ಪೊಲೀಸರು ಎಂದು ಹೇಳಿಕೊಂಡು ಯುವಕ ಯುವತಿಯ ಫೋಟೊ ತೆಗೆದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಿಮ್ಮ ಮರ್ಯಾದೆ ತೆಗೆಯುತ್ತೇವೆ ಎಂದು ಹೆದರಿಸುತ್ತಿದ್ದರು. ನಂತರ ಅವರಿಂದ ಹಣ ಮತ್ತು ಆಭರಣ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಪ್ರೇಮಿಗಳಿಂದ ದೋಚುತ್ತಿದ್ದ ರಘು ಈಗ ಪೊಲೀಸರ ಅಥಿತಿಯಾಗಿದ್ದಾನೆ. ರಘು ಸಹಚರ ರವೀಶ್ ಕೂಡ ಜೈಲು ಸೇರಿದ್ದು, ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಹಾಗೂ ಕೈಕೋಳವನ್ನು ವಶಪಡಿಸಿಕೊಳ್ಳಲಾಗಿದೆ. ಯಾರೇ ಬಂದು ನಾವು ಪೊಲೀಸರು ಎಂದು ಹಣ ಕೇಳಿದರೆ ಹಣ ನೀಡದೇ, ಭಯ ಪಡದೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಎಸ್ಪಿ ಅನೂಪ್ ಶೆಟ್ಟಿ ಜನರಲ್ಲಿ ಮನವಿ ಮಾಡಿದ್ದಾರೆ.