ಮಾಗಡಿಯಲ್ಲಿ ನವವಿವಾಹಿತೆ ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಗಂಡನ ಬಂಧನ
ರಾಮನಗರ, ಆಗಸ್ಟ್ 23: ಮಾಗಡಿಯ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನಾಗರಾಜ್ ನನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 21ರಂದು ಮನೆಯಲ್ಲಿ ಪತ್ನಿ ಪೂರ್ಣಿಮಾಳನ್ನು ಕೊಲೆ ಮಾಡಿ ನಾಗರಾಜ್ ಪರಾರಿಯಾಗಿದ್ದನು. ಈತನನ್ನು ಹುಲಿಯೂರು ದುರ್ಗದಲ್ಲಿ ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಮಚ್ಚು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮ ನಿವಾಸಿ ನಾಗರಾಜ್ ಕೃಷಿ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಬಿದರ ಕಲ್ಲಿನ ನಿವಾಸಿಯಾಗಿದ್ದ ಪೂರ್ಣಿಮಾ ಎಂಬ ಯುವತಿಯನ್ನು ಕಳೆದ ನವೆಂಬರ್ ನಲ್ಲಿ ವಿವಾಹವಾಗಿದ್ದನು.
ಮಾಗಡಿಯ ಹಾಲಶೆಟ್ಟಿಹಳ್ಳಿಯಲ್ಲಿ ನವವಿವಾಹಿತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ
ಅನುಮಾನ ಪಡುತ್ತಿದ್ದ ಮತ್ತು ವರದಕ್ಷಿಣೆ ತರುವಂತೆ ನಾಗರಾಜ್ ಪೂರ್ಣಿಮಾಳನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಹಲವು ಬಾರಿ ಹಿರಿಯರು ರಾಜಿ ಪಂಚಾಯ್ತಿ ಕೂಡ ನಡೆಸಿದ್ದರು. ಬುಧವಾರ ಮಧ್ಯಾಹ್ನವೂ ಇವರಿಬ್ಬರ ನಡುವೆ ಜಗಳ ಆರಂಭವಾಗಿ, ವಿಕೋಪಕ್ಕೆ ತಿರುಗಿ ನಾಗರಾಜ್ ಪೂರ್ಣಿಮಾ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಪರಾರಿಯಾಗಿದ್ದಾನೆ.
ತನಿಖೆಯ ಸಮಯದಲ್ಲಿ ಈ ವಿಚಾರವನ್ನು ನಾಗರಾಜ್ ಬಾಯಿ ಬಿಟ್ಟಿದ್ದಾನೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪೂರ್ಣಿಮಾಳ ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು.