ರಾಮನಗರದಲ್ಲಿ ನಿಧಿ ಆಸೆಗಾಗಿ ಶಿಲಾಶಾಸನ , ವೀರಗಲ್ಲು ನಾಶ ಮಾಡಿದ ದುಷ್ಕರ್ಮಿಗಳು
ರಾಮನಗರ, ಆಗಸ್ಟ್.28: ನಿಧಿ ಆಸೆಗಾಗಿ ಪ್ರಾಚೀನ ಕಾಲದ ವೀರಗಲ್ಲು ಮತ್ತು ಶಿಲಾಶಾಸನವನ್ನು ನಿಧಿ ಚೋರರು ನಾಶ ಮಾಡಿರುವ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.
ಗ್ರಾಮದ ವೀರಭಧ್ರಸ್ವಾಮಿ ದೇವಾಲಯ ಸಮೀಪವಿರುವ ಮಾವಿನ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಲವಾರು ವರ್ಷಗಳಿಂದ ವೀರಗಲ್ಲು ಇರುವ ಸ್ಥಳದಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಶೋಧ ನಡೆಸಿದ್ದಾರೆ.
ನಿಧಿಗಾಗಿ ಮಂತ್ರವಾದಿಯಿಂದ ಮಾರ್ಕ್, ಒದೆ ಕೊಟ್ಟ ಗ್ರಾಮಸ್ಥರಿಂದ ಶಾಕ್
ನಿನ್ನೆ ಸೋಮವಾರ ತಡರಾತ್ರಿ ಜೆಸಿಬಿ ಬಳಸಿ ವೀರಗಲ್ಲುಗಳನ್ನು ಹೊರಕ್ಕೆ ತಗೆದು ಸುಮಾರು ಐದು ಅಡಿ ಆಳ ಮಣ್ಣು ತೋಡಿ ನಿಧಿ ಶೋಧ ಕಾರ್ಯ ಮಾಡಿದ್ದಾರೆ. ಇದರಿಂದ ಲಕ್ಕೋಜನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಧಿ ಇದೆ ಎಂಬ ಮೂಢ ನಂಬಿಕೆಯಿಂದ ಮಣ್ಣು ತೋಡಿ ವೀರಗಲ್ಲುಗಳನ್ನು ಹೊರ ತಗೆದಿರುವ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದಲ್ಲಿ ಖದೀಮರು ನಿಧಿ ಆಸೆಗಾಗಿ ವಿಜಯನಗರ ಕಾಲದ ದೇವಸ್ಥಾನವೊಂದನ್ನು ಅಗೆದಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಾಲಯವಾದ ಆಂಜನೇಯ ದೇಗುಲದಲ್ಲಿ ಕಳ್ಳರು ಗುಂಡಿ ತೋಡುವ ಮೂಲಕ ನಿಧಿಗಾಗಿ ಶೋಧ ನಡೆಸಿದ್ದಾರೆ ಎನ್ನಲಾಗಿತ್ತು.
ಭಕ್ತರು ದೇವಸ್ಥಾನಕ್ಕೆ ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ದೇವಸ್ಥಾನದಲ್ಲಿ ಬಿದ್ದಿದ್ದ ಗುಂಡಿಯನ್ನು ಸ್ಥಳೀಯರು ಮುಚ್ಚಿದರು.