ಬಿಜೆಪಿ, ಜೆಡಿಎಸ್ ಅಪಪ್ರಚಾರಕ್ಕೆ ಜನ ತಕ್ಕ ಪಾಠ ಕಲಿಸ್ತಾರೆ: ಡಿಕೆಶಿ
ಕನಕಪುರ (ರಾಮನಗರ ಜಿಲ್ಲೆ), ಏಪ್ರಿಲ್ 6 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದೆ. ಬಿಜೆಪಿ ಮತ್ತು ಜೆಡಿಎಸ್ ನ ಯಾವುದೇ ಅಲೆ ಇಲ್ಲ. ನಮ್ಮ ಗೆಲುವು ಅಚಲವಾಗಿದ್ದು, ಅವರು ಅಪಪ್ರಚಾರ ಮಾಡುತ್ತಾ ಇದ್ದಾರೆ. ಇದಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು
ಕನಕಪುರ ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿ, ಹೊಸದುರ್ಗ, ದೊಡ್ಡಾಲಹಳ್ಳಿ ಮತ್ತು ಸಾತನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಅರೋಪ ಮಾಡಿದರು.
ಬಿಎಸ್ ವೈ ಮೇಲೆ 4 ಕೋಟಿ ಲಂಚ ಆರೋಪ: ಕಾಂಗ್ರೆಸ್ ನಿಂದ ದಾಖಲೆ ಬಿಡುಗಡೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಸರಕಾರ ಐದು ವರ್ಷ ಪೂರೈಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ ಮತ್ತು ಮನಸ್ವಿನಿ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ಯಶಸ್ವಿ ಆಗಿರುವುದರಿಂದ ಕಾಂಗ್ರೆಸ್ ಆಡಳಿತಕ್ಕೆ ಜನರ ಬೆಂಬಲ ಅಚಲವಾಗಿದೆ ಎಂದರು
ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವ ಮೂಲಕ ಅವರ ಋಣ ತೀರಿಸಲು ದುಡಿದಿದ್ದೇನೆ. ಪ್ರಗತಿಪರ ಕೆಲಸಗಳನ್ನು ಅನುಷ್ಠಾನಗೊಳಿಸಿದ ಸಮಾಧಾನ ನನಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ಎಂದರು
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಕ್ಷೇತ್ರದ ಜನತೆ ಗ್ರಾಮದ ಹಬ್ಬವನ್ನು ಆಚರಿಸುವಂತೆ ಬೆಂಗಳೂರಿನಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರನ್ನು ಕರೆಸಿ, ನೀವೇ ನಿಂತು ಹೆಚ್ಚು ಮತಗಳನ್ನು ಹಾಕಿಸಿ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಿಮ್ಮದು. ಯಾವುದೇ ಪಕ್ಷಪಾತ ಮಾಡದೆ ಅಭಿವೃದ್ಧಿಗೆ ಶ್ರಮಿಸಿರುವ ನಮಗೆ ಮತ ನೀಡಿದರೆ ಮುಂದೆ ಎಲ್ಲ ಬಡವರಿಗೂ ಸೂರು, ಶಿಕ್ಷಣ ಸೇರಿದಂತೆ ಎಲ್ಲ ಸರಕಾರಿ ಸವಲತ್ತುಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಇನ್ನೂ ಇಪ್ಪತ್ತು ವರ್ಷ ವಿದ್ಯುತ್ ಸಮಸ್ಯೆ ಬಾರದಂತೆ ವಿದ್ಯುತ್ ಶಕ್ತಿ ಉತ್ಪಾದನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರ ಅನುಕೂಲಕ್ಕಾಗಿ ಹಗಲಿರುಳು ವಿದ್ಯುತ್ ನೀಡಲು ಸೂರ್ಯ ರೈತ ಯೋಜನೆ ಹಾಗೂ ಐಪಿ ಸೆಟ್ಗಳಿಗೆ ಉಚಿತ ಟ್ರಾನ್ಸ್ ಫಾರ್ಮರ್ ಗಳನ್ನು ನೀಡುವ ಮೂಲಕ ರೈತರ ಅಭಿವೃದ್ಧಿಗೆ ಶಕ್ತಿ ನೀಡಲಾಗಿದೆ ಎಂದು ಹೇಳಿದರು.