ಪ್ರತಿಭಟನೆ ಎಚ್ಚರಿಕೆ ಕೊಟ್ಟ ರಾಮನಗರದ ರೇಷ್ಮೆ ಬೆಳೆಗಾರರು
ರಾಮನಗರ, ಜೂ26: "ರೇಷ್ಮೆ ಉದ್ಯಮಕ್ಕೆ ಮಾರಕವಾಗಿರುವ ಗಂಟುರೋಗ (ಫೆಬ್ರಿನ್) ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜುಲೈ 1ರಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು" ಎಂದು ರಾಜ್ಯ ರೇಷ್ಮೆ ಬೆಳೆಗಾರರು ಹಾಗೂ ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಮಹೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗಂಟುರೋಗವು ತೀವ್ರತರವಾಗಿ ಹರಡುತ್ತಿದ್ದು 8 ರಿಂದ 9 ತಿಂಗಳೊಳಗೆ ನಿಯಂತ್ರಿಸದಿದ್ದಲ್ಲಿ ರೇಷ್ಮೆ ಉದ್ಯಮವೇ ಸಂಪೂರ್ಣವಾಗಿ ನಶಿಸುವ ಮೂಲಕ ಉದ್ಯಮವನ್ನೇ ನಂಬಿರುವ ಮೊಟ್ಟೆ-ಚಾಕಿ ಉತ್ಪಾದಕರು, ಬೆಳೆಗಾರರು, ರೀಲರ್ಗಳು ಹಾಗೂ ಪರೋಕ್ಷವಾಗಿ ಉದ್ಯಮವನ್ನು ಅವಲಂಬಿಸಿರುವವರು ಬೀದಿಪಾಲಾಗುವರು" ಎಂದು ಆತಂಕ ವ್ಯಕ್ತಪಡಿಸಿದರು.
ಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪ
ರೇಷ್ಮೆ ಮೊಟ್ಟೆ ಉತ್ಪಾದಕರ ಆರೋಪ
ಫೆಬ್ರಿನ್ ತಾಯಿ ಚಿಟ್ಟೆಯಿಂದ ಹರಡುವ ಈ ಗಂಟು ರೋಗವು ಮೊದಲಿಗೆ ಆಗಸ್ಟ್ ತಿಂಗಳಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಶೇ 30 ರಿಂದ 35 ರಷ್ಟು ಮೊಟ್ಟೆಗಳಿಗೆ, ಕೋಶಗಳಿಗೆ, ಚಾಕಿ ಹಂತಕ್ಕೆ ತಗುಲಿದೆ. ಆದರೆ, ರೇಷ್ಮೆ ಇಲಾಖೆ ಅಧಿಕಾರಿಗಳು ಶೇ 1.5 ರಿಂದ 2 ರಷ್ಟು ಬಿತ್ತನೆ ಮೊಟ್ಟೆಗಳಿಗೆ ಮಾತ್ರವೇ ಈ ರೋಗ ಹರಡಿದೆ ಎಂದು ಸುಳ್ಳು ಹೇಳುವ ಮೂಲಕ ಸರ್ಕಾರದ ದಾರಿತಪ್ಪಿಸುತ್ತಿದ್ದಾರೆ ಎಂದು ರೇಷ್ಮೆ ಮೊಟ್ಟೆ ಉತ್ಪಾದಕರು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾರಕ ರೋಗ ವ್ಯಾಪಕವಾಗಿ ಹರಡುತ್ತಿದೆ. ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸಾಮೂಹಿಕ ಸೋಂಕು ನಿವಾರಣೆ, ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿತ ರೇಷ್ಮೆ ಮೊಟ್ಟೆಗಳನ್ನು ಮತ್ತು ಹುಳುಗಳನ್ನು ಪ್ರಾರಂಭಿಕ ಹಂತದಲ್ಲೇ ಸುಟ್ಟುಹಾಕಬೇಕು.
ರೇಷ್ಮೆ ಬಿತ್ತನೆ ಗೂಡುಗಳಲ್ಲಿ ಪೆಬ್ರಿನ್ ಗಂಟುರೋಗ ಸೋಂಕಿತ ರೇಷ್ಮೆಯನ್ನು ನಾಶ ಮಾಡಿ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ನುರಿತ ವಿಜ್ಞಾನಿಗಳು, ತಜ್ಞರ ಸಿಬ್ಬಂದಿಯನ್ನು ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ, ಗುಣಮಟ್ಟ ಪರೀಕ್ಷೆ ಮಾಡಿಸಿ ರೋಗ ನಿಯಂತ್ರಣಕ್ಕೆ ತರಬೇಕು ಎಂದು ರೇಷ್ಮೆ ಬಿತ್ತನೆ ಮೊಟ್ಟೆ ತಯಾರಿಕರು ಆಗ್ರಹಿಸಿದರು.
ರೋಗಪೀಡಿತ ಗೂಡನ್ನ ಮೊಟ್ಟೆ ಉತ್ಪಾದಕರಿಗೆ ಪೂರೈಕೆ
ರೇಷ್ಮೆ ಇಲಾಖೆಯಲ್ಲಿರುವ ಭ್ರಷ್ಟ ಹಾಗೂ ಮೈಗಳ್ಳ ಅಧಿಕಾರಿಗಳು ರೋಗ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು ವಾಸ್ತವ ಅಂಕಿ-ಅಂಶಗಳನ್ನು ಮುಚ್ಚಿಡುತ್ತಿದ್ದಾರೆ. ಬಿತ್ತನೆ ಮೊಟ್ಟೆ ತಯಾರಿಕೆಗೆ ಶೇ. 50ರಷ್ಟು ರೋಗಪೀಡಿತ ಗೂಡನ್ನು ಮೊಟ್ಟೆ ಉತ್ಪಾದಕರಿಗೆ ಪೂರೈಸುತ್ತಿದ್ದಾರೆ. ಇದರಿಂದ ಭಾರೀ ನಷ್ಟ ಉಂಟಾಗುತ್ತಿದ್ದು, ಬೀದಿಗೆ ಬೀಳುವ ಆತಂಕವನ್ನು ರೇಷ್ಮ ಮೊಟ್ಟೆ ಉತ್ಪಾದಕರು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೇಷ್ಮೆ ಮೊಟ್ಟೆ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ. ಮಹೇಂದ್ರ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ರೇಷ್ಮೆ ಮೊಟ್ಟೆ ಉತ್ಪಾದಕ ಮುನಿರಾಜು, ಅಧಿಕೃತ ರೇಷ್ಮೆ ಮೊಟ್ಟೆ ಉತ್ಪಾದಕರಾದ ನಾಗರಾಜು, ಸೈಯದ್ ಇಮ್ರಾನ್, ಶಿವಕುಮಾರ್, ಕೃಷ್ಣಪ್ಪ, ಗಣೇಶ್ ಮತ್ತಿತರರು ಇದ್ದರು.
ರೋಗ ನಿಯಂತ್ರಣಕ್ಕೆ ಮುಂದಾಗದ ಸರ್ಕಾರ
ವ್ಯಾಪಕವಾಗಿ ಹಬ್ಬುತ್ತಿರುವ ಗಂಟುರೋಗ ಫೆಭ್ರಿನ್ ಸೋಂಕನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸರ್ಕಾರಕ್ಕೆ ನಾಲ್ಕೈದು ಬಾರಿ ಮನವಿ ಮಾಡಲಾಗಿದೆ. ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಅವರೊಂದಿಗೂ ಸಭೆ ನಡೆಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ರೇಷ್ಮೆ ಮೊಟ್ಟೆ ಉತ್ಪಾದಕರು ಆರೋಪಿಸಿದರು.
ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತುರ್ತಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡು ರೇಷ್ಮೆ ಉದ್ಯಮದ ಉಳಿವಿಗೆ ಮುಂದಾಗದಿದ್ದರೆ ಅನಿವಾರ್ಯವಾಗಿ ಜುಲೈ 1ರಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ರೇಷ್ಮೆ ಮೊಟ್ಟೆ ತಯಾರಕರ ಒಕ್ಕೂಟ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಈಗಾಗಲೇ 46 ಬ್ಯಾಚ್ ಗಳಲ್ಲಿ ಗಂಟು ರೋಗಾಣು ಕಂಡುಬಂದಿದೆ ಎಂಬುದನ್ನು ರೇಷ್ಮೆ ಇಲಾಖೆ ದೃಢಪಡಿಸಿದೆ. ಈ ಪೆಬ್ರಿನ್ ರೋಗಾಣು ಸೋಂಕಿತ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸುವ ಭೀತಿಯಲ್ಲಿದೆ ರೇಷ್ಮೆ ಉದ್ಯಮ
2 ವರ್ಷಗಳ ಹಿಂದೆ 1 ಲಕ್ಷ ಮೆಟ್ರಿಕ್ ಟನ್ಗಳಷ್ಟಿದ್ದ ಚೀನಾ ದೇಶದ ರೇಷ್ಮೆ ಉತ್ಪಾದನೆ, ಪ್ರಸ್ತುತ 53 ಸಾವಿರ ಮೆಟ್ರಿಕ್ ಟನ್ಗಳಿಗೆ ಕುಸಿದಿದೆ. ಅಲ್ಲದೇ ಇಟಲಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಈಗಾಗಲೇ ರೇಷ್ಮೆ ಉದ್ಯಮ ಫೆಭ್ರಿನ್ ರೋಗದಿಂದ ಸಂಪೂರ್ಣ ನಾಶವಾಗಿದೆ. ದೇಶದಲ್ಲಿ ರೇಷ್ಮೆ ಉತ್ಪಾದನೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಸಾವಿರ ರೂಪಾಯಿವರೆಗೆ ತಲುಪಿದೆ. ವಿದೇಶಿ ರೇಷ್ಮೆ ಉತ್ಪಾದನೆ ಕುಂಠಿತಗೊಂಡ ಪರಿಸ್ಥಿತಿಯನ್ನು ಬಳಸಿಕೊಂಡು ರೇಷ್ಮೆ ಬೆಳೆಯುವ ಪ್ರದೇಶವನ್ನು ವಿಸ್ತರಿಸಿ, ಮೊಟ್ಟೆ ಉತ್ಪಾದನೆಗೆ ಗುಣಮಟ್ಟದ ಗೂಡುಗಳನ್ನು ಪೂರೈಸಿದ್ದರೆ ರೇಷ್ಮೆಯಲ್ಲಿ ದೇಶವು ಸ್ವಾವಲಂಬನೆ ಹೊಂದಬಹುದಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ರೇಷ್ಮೆ ಉದ್ಯಮ ನಶಿಸುವ ಭೀತಿಯಲ್ಲಿದೆ ಎಂದು ರೈತರು ಹೇಳಿದ್ದಾರೆ.