ನಾಪತ್ತೆಯಾದ ಮಗುವಿನ ಪತ್ತೆಗೆ 1 ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದ ಪೋಷಕರು
ರಾಮನಗರ, ಸೆಪ್ಟೆಂಬರ್ 17: ಕಳೆದ ನಾಲ್ಕು ದಿನಗಳ ಹಿಂದೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕ, ಮನೆಯ ಕೂಗಳತೆ ದೂರದಲ್ಲಿ ಇದ್ದ ಅಂಗಡಿಯಲ್ಲಿ ಬಲೂನು ತರಲು ಹೋಗಿ ಬಾಲಕ ನಾಪತ್ತೆಯಾಗಿರುವ ಘಟನೆ ರಾಮನಗರದ ಮೆಹಬೂಬ್ ನಗರದಲ್ಲಿ ನಡೆದಿದೆ.
ರಾಮನಗರದ ಮೆಹಬೂಬ್ ನಗರದ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ 4 ವರ್ಷದ ಸಾಕು ಮಗ ದಯಾನ್ ಖಾನ್ ಕಾಣೆಯಾಗಿದ್ದಾನೆ. ಕಳೆದ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬಾಲಕ ಆಟವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ.
ಹೀಗೆ ಮನೆಯಿಂದ ಹೊರ ಬಂದ ಬಾಲಕನಿಗೆ ಮನೆಯ ಮುಂದೆ ಇದ್ದ ಅಂಗಡಿಯಲ್ಲಿ ಬಲೂನಿನ ಮೇಲೆ ಆಸೆಯಾಗಿದೆ. ಇತ್ತ ಮನೆ ಒಳಗೆ ಹೋಗಿ ಅಮ್ಮನಿಂದ 5 ರೂ ಪಡೆದು ಅಂಗಡಿಗೆ ಹೋಗಿದ್ದಾನೆ. ಅಂಗಡಿಗೆ ಬಂದ ಬಾಲಕ ಹಣ ಕೊಟ್ಟು ಬಲೂನ್ ಪಡೆದು ಅಂಗಡಿಯಿಂದ ಹಿಂತಿರುಗಿದೆ, ಸೋಮವಾರ ರಾತ್ರಿಯಿಂದ ಕಾಣೆಯಾಗಿದೆ.
ಈ ಸಂಬಂಧ ಮಗುವಿನ ಪೋಷಕರು ರಾಮನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ ಹಾಗೂ ಬಾಲಕನನ್ನು ಪತ್ತೆ ಮಾಡಿ ಕೊಟ್ಟವರಿಗೆ 1 ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
Recommended Video
ಅಂದಹಾಗೆ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ದಂಪತಿಗೆ ಮಕ್ಕಳಾಗಿರಲಿಲ್ಲ ಹಾಗಾಗಿ ಅಲ್ಮಜ್ ಬೇಗಂ ಅವರ ಸಹೋದರ ಸಂಶೀರ್ ಖಾನ್ ಅವರ ಮಗುವನ್ನು ದತ್ತು ಪಡೆದು ಇವರೆ ಲಾಲನೆ ಪಾಲನೆ ಮಾಡುತ್ತಿದ್ದರು. ಆದರೆ ಇದೀಗ ಆ ಬಾಲಕ ಕಾಣೆಯಾಗಿದ್ದಾನೆ, ಇದು ಪೋಷಕರಿಗೆ ಅತಿ ದುಃಖ ತರಿಸಿದೆ.
ತಮ್ಮ ಮಗನನ್ನು ಕಾಣದೆ ತಾಯಿ ಅಲ್ಮಜ್ ಬೇಗಂ ಕುಗ್ಗಿ ಹೋಗಿದ್ದಾರೆ. ತಮ್ಮ ಮಗನ ಸುಳಿವು ಹಾಗೂ ಹುಡುಕಿ ಕೊಟ್ಟವರಿಗೆ 1 ಲಕ್ಷ ನಗದು ಹಣವನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದು ಹೇಳುತ್ತಿದ್ದಾರೆ.
ಬಹಳ ವರ್ಷಗಳಿಂದ ಮಕ್ಕಳಿಲ್ಲದೆ ಕೊರುಗುತ್ತಿದ್ದ ದಂಪತಿಗೆ ಈ ಬಾಲಕ ದತ್ತು ಮಗನ ರೂಪದಲ್ಲಿ ಮನೆ ಮಗನಾಗಿ ಬಂದಿದ್ದ. ಆದರೆ ಇದೀಗ ಮನೆ ಮಗನೆ ಕಾಣೆಯಾಗಿದ್ದು, ಇಡೀ ಕುಟುಂಬ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದೆ.