ರಾಮನಗರಕ್ಕೆ ನಮ್ಮ ಕುಟುಂಬ ಯಾವತ್ತೂ ಚಿರಋಣಿ ಎಂದ ಶಾಸಕಿ
ರಾಮನಗರ, ಮೇ 11: "ನಾವು ಮಾಡೋ ಸೇವೆ ನಮಗೆ ಆತ್ಮತೃಪ್ತಿ ಕೊಡಬೇಕು. ಸಂಕಷ್ಟದಲ್ಲಿರುವ ಜನರಿಗೆ ನಾವು ಹೃದಯಪೂರ್ವಕವಾಗಿ ಸಹಕಾರಕ್ಕೆ ನಿಂತಿದ್ದೇವೆ. ನನಗೆ, ಕುಮಾರಸ್ವಾಮಿಯವರಿಗೆ, ನಿಖಿಲ್ ಗೆ ಆತ್ಮತೃಪ್ತಿ ಇದೆ. ನಮ್ಮ ಸೇವೆ ಬಗ್ಗೆ ಸಾರ್ಥಕತೆ ಕಂಡಿದ್ದೇವೆ. ಈಗಾಗಲೇ ಸುಮಾರು 60 ಸಾವಿರ ದಿನಸಿ ಕಿಟ್ ವಿತರಿಸಿದ್ದೇವೆ" ಎಂದು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
Recommended Video
ಕ್ಷೇತ್ರದ ಕಸಬಾ ಹೋಬಳಿ, ಕೈಲಾಂಚ ಹೋಬಳಿ ಹಾಗೂ ಪಟ್ಟಣದ 31ನೇ ವಾರ್ಡ್ ಗಳಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, "ನಾವು ಬೇರೆ ಯಾರನ್ನೋ ಮೆಚ್ಚಿಸಲಿಕ್ಕೆ ಜನರಿಗೆ ಸಹಾಯ ಮಾಡ್ತಿಲ್ಲ. ನಮ್ಮ ಕುಟುಂಬಕ್ಕೆ ಸದಾ ಆಶೀರ್ವಾದ ಮಾಡುತ್ತಾ, ನಮಗೆ ಸದಾ ಬೆಂಬಲ ಕೊಡುತ್ತಿರುವ ನಮ್ಮ ಜನರ ಸಂಕಷ್ಟದಲ್ಲಿ ಭಾಗಿಯಾಗಿದ್ದೇವೆ ಅನ್ನೋ ತೃಪ್ತಿ ಭಾವ ನಮ್ಮಲ್ಲಿದೆ. ಅಷ್ಟು ಸಾಕು" ಎಂದರು.
ರಾಮನಗರದಲ್ಲಿ ದಿನಸಿ ಕಿಟ್ ವಿತರಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್
"ರಾಮನಗರದ ಜೊತೆಗೆ ತಾಯಿ ಮಗನ ಸಂಬಂಧ ಇದೆ ಅಂತ ಕುಮಾರಸ್ವಾಮಿಯವರು ಎಷ್ಟೋ ಬಾರಿ ಹೇಳಿದ್ದಾರೆ. ಅದು ಅವರ ಹೃದಯಸ್ಪರ್ಶಿ ಮಾತು. ನಮ್ಮ ಕುಟುಂಬಕ್ಕೆ ರಾಮನಗರದ ಜೊತೆ ಅವಿನಾಭಾವ ಸಂಬಂಧ ಇದೆ. ಅದಕ್ಕೋಸ್ಕರವೇ ರಾಮನಗರದ ಜನ ನಮ್ಮನ್ನು ಯಾವತ್ತೂ ಕೈಬಿಟ್ಟಿಲ್ಲ, ಬಿಡೋದೂ ಇಲ್ಲ. ನಮ್ಮ ಕುಟುಂಬ ಕೂಡ ರಾಮನಗರದ ಜನರಿಗೆ ಚಿರ ಋಣಿಗಳಾಗಿರುತ್ತೇವೆ" ಎಂದರು.