ರಾಜ್ಯ ಸರ್ಕಾರಕ್ಕೆ ಒಂದು ವರ್ಷ: ಕರಾಳ ದಿನ ಆಚರಿಸಿದ ವಾಟಾಳ್ ನಾಗರಾಜ್
ರಾಮನಗರ, ಜುಲೈ 27: ಕೋವಿಡ್-19 ನಿಭಾಯಿಸುವಲ್ಲಿ ವಿಫಲವಾಗಿದ್ದರೂ, ರಾಜ್ಯ ಸರ್ಕಾರ ತನ್ನ ಒಂದು ವರ್ಷದ ಸಂಭ್ರಮದಲ್ಲಿ ಮುಳುಗಿರುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರಾಳ ದಿನ ಆಚರಣೆ ಮಾಡಿದ್ದಾರೆ.
Recommended Video
ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಕರಾಳ ಭೂತ ದಹಿಸಿ ಸರ್ಕಾರದ ವಿರುದ್ಧ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ರಾಮನಗರಕ್ಕೆ 4000 ರ್ಯಾಪಿಡ್ ಆ್ಯಂಟಿಜೆನ್ ಕಿಟ್; 24x7 ಪರೀಕ್ಷೆ
ರಾಜ್ಯದಲ್ಲಿ ಕೊರೊನಾ ವೈರಸ್ ಗೆ ಜನರು ಬಲಿಯಾಗುತ್ತಿದ್ದಾರೆ, ಬಿಜೆಪಿ ಸರಕಾರ ಒಂದು ವರ್ಷದ ಸಂಭ್ರಮದಲ್ಲಿದೆ. ಇವತ್ತು ಸಂಭ್ರಮದ ದಿನ ಅಲ್ಲ, ಕರಾಳ ದಿನ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಳ್ ಹರಿಹಾಯ್ದರು.
ರಾಜ್ಯ ಬಿಜೆಪಿ ಸರ್ಕಾರ ಶೂನ್ಯ ಸಾಧನೆ ಮಾಡಿದ್ದರೂ, ಪ್ರತಿ ದಿನ ಪತ್ರಿಕೆಗಳಲ್ಲಿ ಸರ್ಕಾರವನ್ನು ಹೊಗಳುವ ಜಾಹೀರಾತುಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ತಲ್ಲೀನವಾಗಿದೆ. ರಾಜ್ಯದಲ್ಲಿ ಪ್ರತಿ ದಿನ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗುತಿದ್ದಾರೆ. ಕೋವಿಡ್-19 ತಡೆಗಟ್ಟುವಲ್ಲಿ ಸಿಎಂ ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
ಚನ್ನಪಟ್ಟಣದಲ್ಲಿ 500 ಜನರ ಚಿಕಿತ್ಸೆಗೆ ವ್ಯವಸ್ಥೆ: ಡಿಸಿಎಂ ಅಶ್ವಥ್ ನಾರಾಯಣ್
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಣ ವಸೂಲಿ ಹೆಚ್ಚಾಗಿದೆ. ಕೋವಿಡ್-19 ಗೆ ಬಲಿಯಾದವರ ಅಂತ್ಯ ಸಂಸ್ಕಾರ ಯೋಗ್ಯ ರೀತಿಯಲ್ಲಿ ನಡೆಯುತ್ತಿಲ್ಲ, ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಮಂತ್ರಿಗಳ ನಡುವೆ ಸಾಮರಸ್ಯ ಇಲ್ಲ, ಹಾಗಾಗಿ ಕೊರೊನಾವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ವಾಟಾಳ್ ಆರೋಪ ಮಾಡಿದರು.