ಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆ
ರಾಮನಗರ, ಮೇ 09; ಸರ್ಕಾರ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ ಕದ್ದು ಮುಚ್ಚಿ ಪೊಲೀಸರು ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಸಲಾಗುತ್ತದೆ. ಇಂತಹ ಬಾಲ್ಯ ವಿವಾಹವನ್ನು ತಡೆದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಮುನಿಯಪ್ಪನ ದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆಯಬೇಕಿದ್ದ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಅದನ್ನು ತಡೆಯುವಲ್ಲಿ ಯಶಸ್ವಿಯಾದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೈಲ್ಡ್ ಲೈನ್ ಮೇಲ್ವಿಚಾರಣೆಯಲ್ಲಿ ಮಕ್ಕಳ ಸಹಾಯವಾಣಿ, ಹಾಗೂ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿ ಬಾಲ್ಯ ವಿವಾಹ ತಡೆದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಕಿಯ ವಯಸ್ಸಿನ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಬಾಲಕಿಗೆ 18 ವರ್ಷ ತುಂಬಲು ಇನ್ನೂ 9 ತಿಂಗಳು ಬಾಕಿ ಇರುವ ಕಾರಣ ಬಾಲ್ಯ ವಿವಾಹವನ್ನು ತಡೆದು, ಬಾಲಕಿ ರಕ್ಷಣೆ ಮಾಡಲಾಗಿದೆ.
ಅಧಿಕಾರಿಗಳು ವಿವಾಹ ತಡೆಯಲು ಬಂದಾಗ ಪೋಷಕರು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ, ಮಕ್ಕಳ ಸಹಾಯ ವಾಣಿ ಹಾಗೂ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಳಘಟ್ಟ ಗ್ರಾಮದಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಕಳಿಸಿದರು.
ಸಿಡಿಪಿಓ ಪ್ರತಿಕ್ರಿಯೆ; ಬಾಲ್ಯ ವಿವಾಹ ತಡೆಗಟ್ಟಿ, ಬಾಲಕಿಯನ್ನು ರಕ್ಷಣೆ ಮಾಡಿದ ತಂಡದ ನೇತೃತ್ವ ವಹಿಸಿದ್ದ ಶಿಶು ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಯ್ಯ ಮಾತನಾಡಿ, "ಬಾಲ್ಯವಿವಾಹದ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಬಂದ ಹಿನ್ನಲೆಯಲ್ಲಿ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ವಿಚಾರಿಸಿ, 18 ವರ್ಷ ತುಂಬಲು ಇನ್ನೂ 9 ತಿಂಗಳು ಬಾಕಿ ಇರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಬಾಲ್ಯವಿವಾಹ ತಡೆಗಟ್ಟಿದ್ದೇವೆ" ಎಂದರು.
ಅಧಿಕಾರಿಗಳು ರಕ್ಷಣೆ ಮಾಡಿದ ಅಪ್ರಾಪ್ತ ಬಾಲಕಿಗೆ ವಿವಾಹ ನಿಲ್ಲಿಸಲು ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಬಲವಂತವಾಗಿ ಮದುವೆ ಮಾಡಲು ಮುಂದಾದರು. 32 ವರ್ಷದ ವರನೊಂದಿಗೆ ಮದುವೆ ಮಾಡಲು ಮುಂದಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯೊಂದಿಗೆ ಮದುವೆಗೆ ಮುಂದಾಗಿದ್ದ ವರನಿಗೆ ಹಾಗೂ ಬಾಲಕಿ ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಅವರು ಒಪ್ಪದಿದ್ದರೆ ಪ್ರಕರಣ ದಾಖಲು ಮಾಡುತ್ತೇವೆ. ಇನ್ನೂ ಬಾಲಕಿಗೆ 18 ವರ್ಷ ತುಂಬುವವರೆಗೂ ಆಕೆಗೆ ಬಾಲಮಂದಿರದಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
Recommended Video